ಕೊಪ್ಪಳ: ರಾಜ್ಯದಲ್ಲಿನ ನಗರ ಪ್ರದೇಶಗಳ ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಸ್ಲಂ ಜನಾಂದೋಲನಾ- ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
ಈಗಿರುವ ಕೊಳಚೆ ನಿರ್ಮೂಲನಾ ಮಂಡಳಿಯನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಎಂಬುದಾಗಿ ಬದಲಾಯಿಸಲು ಕಾಯ್ದೆಗೆ ಸೂಕ್ತ ತಿದ್ದುಪಡಿ ತರಬೇಕು. ಆ ಮೂಲಕ ಕೊಳಚೆ ಪ್ರದೇಶಗಳ ಜನರಿಗೆ ಅಗತ್ಯ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 28ರಷ್ಟು ಜನ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಾರೆ.
ಹೀಗಾಗಿ ಕೊಳಚೆ ಪ್ರದೇಶದಲ್ಲಿ ವಾಸಿಸುವ ಜನರ ಸಂಖ್ಯೆಗೆ ಅನುಗುಣವಾಗಿ ಮುಂಗಡಪತ್ರದಲ್ಲಿ ಮಂಡಳಿಗೆ ಅನುದಾನ ನೀಡಬೇಕು. ವಸತಿ ಇಲಾಖೆ ಮೂಲಕ ಮಂಡಳಿ ಅನುದಾನ ನೀಡುತ್ತಿರುವ ಪದ್ಧತಿ ಯನ್ನು ಕೈಬಿಡಬೇಕು ಹಾಗೂ ಮಂಡಳಿಗೆ ಪ್ರತ್ಯೇಕ ಅನುದಾನ ಒದಗಿಸಬೇಕೆಂದು ಒತ್ತಾಯಿಸಿದರು.ಪಡಿತರ ವ್ಯವಸ್ಥೆಯಲ್ಲಿ ಈಗಿರುವಂತೆ ಯೂನಿಟ್ ಪದ್ಧತಿಯನ್ನು ರದ್ದುಗೊಳಿಸಿ, ಒಂದು ಕುಟುಂಬಕ್ಕೆ ಅಗತ್ಯವಿರು ವಷ್ಟು ಆಹಾರಧಾನ್ಯ ನೀಡಬೇಕು,ನೀರು ಪೂರೈಕೆಯಲ್ಲಿ ಖಾಸಗಿಯವರಿಗೆ ವಹಿಸುವುದನ್ನು ನಿಲ್ಲಿಸಬೇಕು ಎಂಬುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಸಹಾಯಕ ಆಯುಕ್ತ ಎಂ.ಶರಣಬಸಪ್ಪ ಅವರಿಗೆ ಸಲ್ಲಿಸಿದರು. ಸಂಘಟನೆಯ ಮುಖಂಡರಾದ ಮುತ್ತಣ್ಣ ಹಾದಿ ಮನಿ, ಸುರೇಶ ಪೂಜಾರ, ಮಂಜು ಪ್ರಸಾದ, ಮಂಜುನಾಥ, ನಾಗರಾಜ, ವೀರೇಶ, ಹನುಮಂತ, ಗಂಗಾಧರ ಈಚನಾಳ, ಹನುಮಂತ ವಡ್ಡರ ಹಾಗೂ ಇತರರು ನೇತೃತ್ವ ವಹಿಸಿದ್ದರು.