ಶಿಡ್ಲಘಟ್ಟ: ಬಡ, ದೀನ ದಲಿತ, ಶೋಷಿತರಿಗೆ ಅಗತ್ಯ ಕಾನೂನು ನೆರವು ದೊರೆಯಬೇಕು ಎಂಬ ಉದ್ದೇಶದಿಂದ ಆಯ್ದ ಜನರಿಗೆ ಕಾನೂನು ತರಬೇತಿ ನೀಡಲಾಗುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ವಿಜಯ್ ಕುಮಾರ್ ತಿಳಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಡೆದ ಸ್ವಯಂ ಪ್ರೇರಿತ ಕಾನೂನು ಸಹಾಯಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, `ಸ್ವಾಮಿ ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯಿಂದ ಆಯ್ದ 25 ಮಂದಿಗೆ ಮೊದಲ ಹಂತದಲ್ಲಿ ಕಾನೂನು ತರಬೇತಿ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ, ರೈತರಿಗೆ, ಕಾರ್ಮಿಕರಿಗೆ ತರಬೇತಿ ನೀಡಲಾಗುವುದು~ ಎಂದರು.
`ಸ್ವಯಂ ಪ್ರೇರಿತರಾಗಿ ಕಾನೂನು ತರಬೇತಿ ಪಡೆದವರು ಜನಸಾಮಾನ್ಯರು, ದುರ್ಬಲರಿಗೆ ಸಹಾಯ ಮಾಡಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಇದರಿಂದ ಬಡವರು, ಶೋಚಿತರು, ದಲಿತರು ಕಾನೂನಿನ ಹೆಸರಿನಲ್ಲಿ ಮೋಸ ಹೋಗುವುದು ತಪ್ಪುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಎ.ಮುರಳೀಧರ, ಎನ್.ಕೆ.ನಟೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ಮಲ್ ಕುಮಾರ್, ವಿವೇಕಾನಂದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಚಿಕ್ಕಮಾರಪ್ಪ, ವಕೀಲರಾದ ರವೀಂದ್ರನಾಥ್, ವಿ.ಸುಬ್ರಮಣ್ಯಪ್ಪ ಮತ್ತಿತರರು ಹಾಜರಿದ್ದರು.