ಸೊರಬ: ನಿಜವಾದ ಜನಸೇವಕ ಆದವನು ಜನಪ್ರತಿನಿಧಿಯಾಗಲು ಸಾಧ್ಯ. ಸೇವೆಯನ್ನು ತೊರೆದು ಚುನಾವಣೆಗಾಗಿ ಪ್ರಯತ್ನಿಸುವ ರಾಜಕಾರಣಿಗಳು ಕೊನೆಯವರೆಗೂ ರಾಜಕಾರಣದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜೇಡಗೇರಿ ಗ್ರಾಮದಲ್ಲಿ ಬುಧವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಮಾತು ಜನರಿಗೆ ತಲುಪುತ್ತದೆ. ಮಾಧ್ಯಮ ಅತ್ಯಂತ ಪ್ರಬಲವಾಗಿದ್ದು, ರಾಜಕಾರಣಿಯ ಮಾತಿನ ಪ್ರಭುತ್ವ ಪ್ರಚುರ ಪಡಿಸುವುದರಿಂದ ಯಾವೊಬ್ಬ ರಾಜಕಾರಣಿ ಸುಳ್ಳು ಹೇಳುತ್ತಿದ್ದಾನೆ ಎಂದು ಜನಸಾಮಾನ್ಯರು ಅರಿಯುತ್ತಾರೆ. ಸಭೆ ಸಮಾರಂಭಗಳಲ್ಲಿ ಹೆಚ್ಚು ಮಾತನಾಡದೇ ಸೇವೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಿದಾಗ ಮಾತ್ರ ಜನತೆಯ ಮನ ಗೆಲ್ಲಲು ಸಾಧ್ಯ ಎಂದರು.
ದಂಡಾವತಿ ಯೋಜನೆ ಹೆಸರಿನಲ್ಲಿ ತಾಲ್ಲೂಕನ್ನು ಇಬ್ಭಾಗ ಮಾಡಲು ಹೊರಟವರಿಗೆ ಜನರೇ ತಕ್ಕಪಾಠ ಕಲಿಸುವುದು ನಿಶ್ಚಿತ. ರೈತರ ಹೆಸರಿನಲ್ಲಿ ರಾಜಕಾರಣ ಮಾಡಿ ರೈತರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗೆ ರೈತರೇ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.
ದಂಡಾವತಿ ಯೋಜನೆಯನ್ನು ರಾಜಕೀಯಕ್ಕಾಗಿ ಪುಸ್ತಕ, ದಾಖಲೆಗಳಲ್ಲಿ ಮಾತ್ರ ಮಾಡಲಾಗುತ್ತಿದೆ. ಯೋಜನೆಯಿಂದ ನೀರಾವರಿ ಮಾಡಲು ಸಾಧ್ಯವಿಲ್ಲ. ತಾವು ಸಚಿವರಾಗಿದ್ದಾಗ ಸೊರಬ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರ ಫಲವಾಗಿ ಇಂದು ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ.
ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿ ಭ್ರಷ್ಟಾಚಾರ ಮಾಡಿ ಜೈಲು ಕಂಬಿ ಎಣಿಸಿ ಬಂದಿರುವ ಹಾಗೂ ಮತ್ತೆ ಸರತಿ ಸಾಲಿನಲ್ಲಿ ಜೈಲಿನ ಬಾಗಿಲು ತಟ್ಟಲಿರುವ ಯಡಿಯೂರಪ್ಪ ಈಗ ಅಧಿಕಾರಕ್ಕಾಗಿ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದಾರೆ. ಸೋನಿಯಾ ಗಾಂಧಿ ಅವರನ್ನು ಬೂಟಾಟಿಕೆಗಾಗಿ ಹೊಗಳುತ್ತಿದ್ದು, ಇಂತಹವರನ್ನು ಕಾಂಗ್ರೆಸ್ಸಿನ ಸೇರಿಸಿಕೊಂಡಲ್ಲಿ ಪಕ್ಷದ ವರ್ಚಸ್ಸಿಗೆ ಕುಂದು ಬರಲಿದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಮಂಜುನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಮಧುಕೇಶ್ವರ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ. ಅಜ್ಜಪ್ಪ, ತಬಲಿ ಬಂಗಾರಪ್ಪ, ದಿನಕರಭಟ್ ಭಾವೆ, ಸಮೀವುಲ್ಲಾ, ರಂಗಪ್ಪ, ಲಿಂಗಪ್ಪ, ಯೂಸೂಫ್ ಸಾಬ್, ಪಕ್ಕೀರಪ್ಪ, ಮಂಜಪ್ಪ ಬನದಕೊಪ್ಪ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.