ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸೇವೆಯೇ ಮೋಕ್ಷಕ್ಕೆ ವೀಸಾ: ಪೇಜಾವರ

Last Updated 4 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಶಿವಮೊಗ್ಗ: ದೇವರು, ಜನರನ್ನು ಬಿಟ್ಟು ಮೋಕ್ಷ ನೀಡಿದರೂ ಅದನ್ನು ಸ್ವೀಕರಿಸುವುದಿಲ್ಲ ಎಂಬ ಸಂಕಲ್ಪವನ್ನು ಎಲ್ಲ ಮಠಾಧೀಶರು ತೊಡಬೇಕು ಎಂದು ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ ಬುಧವಾರ ಸಾರ್ವಜನಿಕ ಸನ್ಮಾನ ಮತ್ತು ತುಲಾಭಾರ ಸ್ವೀಕರಿಸಿ ಅವರು ಮಾತನಾಡಿದರು.

ಜನರ ಸೇವೆ ಮಾಡಿದರೆ ಮಾತ್ರ ಮೋಕ್ಷದ ವೀಸಾ ಸಿಗಲು ಸಾಧ್ಯ. ಎಲ್ಲ ಜನರ ಸೇವೆಯೇ ಜನಾರ್ದನನ ಸೇವೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು.

ಇಂದು ಸೇವೆಯ ಅರ್ಥ ಬದಲಾಗಿದೆ. ಸೇವೆ ಎಂದರೆ ಪ್ರೇಮ ಮತ್ತು ತ್ಯಾಗ. ಭಗವಂತನಲ್ಲಿ ಪ್ರೇಮದಿಂದರುವುದು ಹಾಗೂ ಆತನ ಕೆಲಸದಲ್ಲಿ ತ್ಯಾಗ ಮಾಡುವುದು. ಎಲ್ಲರಲ್ಲೂ ಈ ಸೇವಾಮನೋಭಾವ ಬೆಳೆಯಬೇಕು ಎಂದು ವಿಶ್ಲೇಷಿಸಿದರು.

ವಯಸ್ಸಾಗುವುದು ಸಂತೋಷ ಪಡುವ ವಿಷಯವಲ್ಲ; ಮಾಡುವ ಸೇವೆಯನ್ನು ಇನ್ನಷ್ಟು ವೇಗವಾಗಿ ಮಾಡಲು ನೀಡುವ ಎಚ್ಚರಿಕೆಯ ಗಂಟೆ. ಮುಂದಿನ ದಿನಗಳಲ್ಲಿ ಇದ್ದ ಶಕ್ತಿಯನ್ನೆಲ್ಲ ಸಮಾಜದ ಸೇವೆಯಲ್ಲಿ ಅರ್ಪಿಸುತ್ತೇವೆ ಎಂದರು.

ಮುಕ್ತ ಮುನಿ:
  ಅಭಿನಂದನಾ ಭಾಷಣ ಮಾಡಿದ ವಾಗ್ಮಿ ಪಾವಗಡ ಪ್ರಕಾಶರಾವ್, 74ನೇ ಚಾರ್ತುಮಾಸ ಮುಗಿಸಿದ ಏಕೈಕ ಸಂತ ಪೇಜಾವರ ಸ್ವಾಮೀಜಿ, ಅನ್ಯ ಜಾತಿಗಳ ಸ್ವಾಮೀಜಿ ಜತೆ ಕುಳಿತ ಮುಕ್ತ ಮುನಿ ಎಂದು ಪ್ರಶಂಸಿಸಿದರು.

ಪೇಜಾವರ ಶ್ರೀ ಅವರಲ್ಲಿ ಕಾಣುವ ರಾಷ್ಟ್ರಪ್ರೇಮ ಹಾಗೂ ಜನಪ್ರೀತಿ ಯಾವ ಸ್ವಾಮೀಜಿಯಲ್ಲೂ ಕಾಣಲು ಸಾಧ್ಯವಿಲ್ಲ. ಎಲ್ಲರಲ್ಲೂ ಸಮಾನತೆ, ಸರಳತೆ ಕಂಡವರು. ಬರ, ಪ್ರವಾಹ ಎಲ್ಲದಕ್ಕೂ ಮಿಡಿಯುತ್ತಾ ಬಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ದ್ರವ್ಯ, ಹೂವುಗಳಿಂದ ಪೇಜಾವರ ಸ್ವಾಮೀಜಿ ಅವರನ್ನು ತುಲಾಭಾರ ಮಾಡಲಾಯಿತು. ಪುತ್ತೂರು ನರಸಿಂಹನಾಯಕ್ ಅವರಿಂದ ದಾಸರ ಪದಗಳ ಗಾಯನ ಏರ್ಪಡಿಸಲಾಗಿತ್ತು.
ಶ್ರೀಗಂಧ ಸಂಚಾಲಕ ಶ್ರೀನಾಥ ನಗರಗದ್ದೆ ಕಾರ್ಯಕ್ರಮ  ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT