ಧಾರವಾಡ: ಇಲ್ಲಿಯ ಹೊಸಯಲ್ಲಾಪುರದ ಕೋಳಿಕೆರೆಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಭರವಸೆಯೇ ಉತ್ತರವಾಗಿದ್ದರಿಂದ ಸಾರ್ವಜನಿಕ ರು ಈ `ಸ್ಪಂದನ~ದಿಂದ ಬೇಸರಗೊಂಡರು.
`ಇಷ್ಟು ದಿನ ನಮ್ಮ ವಾರ್ಡ್ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಈಗ ಚುನಾವಣೆ ಹತ್ರ ಬಂದಿದ್ದಕ್ಕ ಶಾಸಕರು, ಅಧಿಕಾರಿಗಳು ವಾರ್ಡ್ಗೆ ಬಂದು ಜನಸ್ಪಂದನ ಅಂತ ಮಾಡ್ತಿದ್ದಾರ... ಆದರ ಈ ಜನಸ್ಪಂದನದಾಗ ನಮಗ ಪರಿಹಾರ ಸಿಗೋ ಭರವಸೆಯೇ ಇಲ್ರಿ...~ ಎಂದು ನಗರದ 8, 9, 10ನೇವಾರ್ಡ್ನ ಜನರು ನಿರಾಸೆ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಭ್ರಷ್ಟಾಚಾರ ವೇದಿಕೆ ಹಾಗೂ ಶಾಸಕಿ ಸೀಮಾ ಮಸೂತಿ ಏರ್ಪಡಿಸಿದ್ದ ಜನಸ್ಪಂದನ ದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದರೆ ಶಾಸಕರು, ಅಧಿಕಾರಿಗಳು `ಕೆಲಸ ಮಾಡಿಸುತ್ತೇವೆ~ ಎಂದು ಭರವಸೆ ನೀಡಿದರೇ ಹೊರತು ಖಚಿತ ನಿರ್ಧಾರ ತಿಳಿಸಲಿಲ್ಲ.
ಗಟಾರ ಹಾಗೂ ವಾರ್ಡ್ ಸ್ವಚ್ಛತೆ ಬಗ್ಗೆ ಯಾವ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, `ದಿನವೂ ಮಾಡುತ್ತಿದ್ದೇವೆ. ಆಕಸ್ಮಾತ್ ಸ್ವಚ್ಛ ಮಾಡದಿದ್ದಲ್ಲಿ ಮನವಿ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದರಿಂದ ಸಿಟ್ಟಾದ ಸಾರ್ವಜನಿಕರು ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡರು. ಹೀಗಾಗಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣ ವಾಯಿತು. ಶಾಸಕಿ ಸೀಮಾ ಮಸೂತಿ, ವಾರ್ಡ್ನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಈ ವಾರ್ಡ್ಗಳ ಅಭಿವೃದ್ಧಿಗೆ ಅನುದಾನ ಒದಗಿಸುವ `ಭರವಸೆ~ ನೀಡಿದರು.