ಬಳ್ಳಾರಿ: ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಇಲ್ಲಿನ ನಿವಾಸದ ಬಳಿ ಆಗ್ನೇಯ ದಿಕ್ಕಿನಲ್ಲಿದ್ದ ಪ್ರವೇಶ ದ್ವಾರಕ್ಕೆ (ಗೇಟ್) ವಾಸ್ತು ತಜ್ಞರ ಸಲಹೆಯಂತೆ ಶನಿವಾರದಿಂದ ಶಾಶ್ವತ ಗೋಡೆ ಕಟ್ಟುವ ಕಾರ್ಯ ಆರಂಭವಾಗಿದೆ.
ಕಳೆದ ಸೋಮವಾರ ಬೆಳಿಗ್ಗೆ ಇದೇ ಗೇಟ್ ಮೂಲಕ ಮನೆಯೊಳಗೆ ಪ್ರವೇಶಿಸಿದ್ದ ಸಿಬಿಐ ಅಧಿಕಾರಿಗಳು, ರೆಡ್ಡಿ ಅವರನ್ನು ಬಂಧಿಸಿ ಇದೇ ಗೇಟ್ ಮೂಲಕ ಕರೆದೊಯ್ದಿದ್ದರು.ಅವರ ಬಂಧನದಿಂದ ಬೇಸತ್ತಿರುವ ಕುಟುಂಬ ವರ್ಗದವರು ಈಗ ವಾಸ್ತು ತಜ್ಞರ ಸಲಹೆಯ ಮೇರೆಗೆ ಆ ಗೇಟ್ಅನ್ನೇ ಮುಚ್ಚಿ ಅಲ್ಲಿ ಶಾಶ್ವತ ಆವರಣ ಗೋಡೆ ನಿರ್ಮಿಸುವ ಕಾರ್ಯ ಆರಂಭಿಸಿದ್ದಾರೆ ಎಂಬುದಾಗಿ ನಿಕಟವರ್ತಿಗಳು ತಿಳಿಸಿದ್ದಾರೆ.
ರೆಡ್ಡಿ ಬಂಧನದ ನಂತರ ಈ ಗೇಟ್ ಬಳಿಯೇ ಮಾಧ್ಯಮ ತಂಡ ಬೀಡು ಬಿಟ್ಟು, ಮನೆಯೊಳಗಿನ ಬೆಳವಣಿಗೆ, ಚಲನವಲನನ್ನು ಸೆರೆ ಹಿಡಿದಿತ್ತು.ವಾಸ್ತು ತಜ್ಞರ ಹೇಳಿಕೆಯಂತೆ ಇದೀಗ ಆ ಗೇಟ್ಅನ್ನು ಸಂಪೂರ್ಣ ಬಂದ್ ಮಾಡಿ, ಇಟ್ಟಿಗೆಯಿಂದ ಗೋಡೆ ಕಟ್ಟಿಸುತ್ತಿದ್ದು, ಕೆಲಸ ಭರದಿಂದ ನಡೆದಿದೆ.