ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐನಿಂದ ಸೆ 5ರಂದು ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನಿವಾಸದಲ್ಲಿ ದೊರೆತಿರುವ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳಲ್ಲಿ ವಜ್ರ ಖಚಿತ ಚಿನ್ನದ ಕುರ್ಚಿ, ವೆಂಕಟೇಶ್ವರ ಹಾಗೂ ಪದ್ಮಾವತಿಯ ಮೂರ್ತಿ ಒಳಗೊಂಡಿವೆ.
ಲೆಕ್ಕವಿಲ್ಲದಷ್ಟು ಚಿನ್ನದ ಆಭರಣಗಳು, ಕೋಟ್ಯಂತರ ರೂಪಾಯಿ ನಗದು, ಚಿನ್ನದ ತಟ್ಟೆ, ಪೂಜಾ ಸಾಮಗ್ರಿ, ಆರತಿ ಮತ್ತಿತರ ವಸ್ತುಗಳಲ್ಲಿ ಸಿಂಹಾಸನದ ಮಾದರಿಯ ಚಿನ್ನದ ಕುರ್ಚಿಯೇ ಆಕರ್ಷಣೀಯ.
ಈ ಕುರ್ಚಿಯಲ್ಲಿ ಚಿನ್ನದಲ್ಲೇ `ಜಿಜೆಆರ್~ಎಂದು ಬರೆಯಲಾಗಿದೆ. ಕುರ್ಚಿಯ ನಾಲ್ಕೂ ಕಾಲುಗಳು, ಮತ್ತಿತರ ಕಡೆಯೆಲ್ಲ ಚಿನ್ನವನ್ನೇ ಬಳಸಲಾಗಿದ್ದು, ಕೆಂಪು ಬಣ್ಣದ ಕುಷನ್ ಕೆಲಸವೂ ಇದೆ.
ಬಹುತೇಕ ಬಳ್ಳಾರಿಯಲ್ಲೇ ಖರೀದಿಸಿರುವ ಚಿನ್ನ ಮತ್ತು ಪ್ಲಾಟಿನಂನ ಆಭರಣಗಳನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ, ಒಟ್ಟು ರೂ 3 ಕೋಟಿ ನಗದನ್ನು ನೋಟು ಎಣಿಸುವ ಯಂತ್ರದ ಸಹಾಯದಿಂದ ಲೆಕ್ಕ ಹಾಕಿದ ಸಿಬಿಐ ಸಿಬ್ಬಂದಿ ರೆಡ್ಡಿ ಕುಟುಂಬ ಸದಸ್ಯರ ಕೋರಿಕೆಯ ಮೇರೆಗೆ ಕೆಲವು ಚಿನ್ನದ ಆಭರಣಗಳನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಸಂಬಂಧಿಯೊಬ್ಬರ ಮದುವೆ ಇರುವುದರಿಂದ ಕೆಲವು ಚಿನ್ನಾಭರಣಗಳನ್ನು ಬಿಟ್ಟು ಹೋಗುವಂತೆ ಕೋರಿದ ಹಿನ್ನೆಲೆಯಲ್ಲಿ ಕರುಣೆ ತೋರಿದ ಸಿಬ್ಬಂದಿ ಕೆಲವನ್ನು ವಶಪಡಿಸಿಕೊಳ್ಳದೆ ಬಿಟ್ಟಿದ್ದಾರೆ.