ಢಾಕಾ (ಪಿಟಿಐ): ಬಾಂಗ್ಲಾದೇಶ ವಿಮೋಚನಾ ಹೋರಾಟ ವೇಳೆ ಎಸಗಿದ ಯುದ್ಧ ಅಪರಾಧಕ್ಕಾಗಿ ಮೂಲಭೂತವಾದಿ ಜಮಾತೆ ಇಸ್ಲಾಮಿ
ಪಕ್ಷದ ಉನ್ನತ ನಾಯಕ ಅಬ್ದುಲ್ ಖಾದರ್ ಮುಲ್ಲಾನನ್ನು ಗುರುವಾರ ರಾತ್ರಿ ಇಲ್ಲಿ ಗಲ್ಲಿಗೇರಿಸಲಾಯಿತು.
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿದ್ದ 65 ವರ್ಷದ ಮುಲ್ಲಾನ ವಿರುದ್ಧ ವಿಧಿಸಿದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದ ಕೆಲವೇ ಗಂಟೆಗಳಲ್ಲಿ (ಸ್ಥಳೀಯ ಕಾಲಮಾನ ರಾತ್ರಿ 10.01 ಕ್ಕೆ ಇದೇ ಜೈಲಿನಲ್ಲಿ) ಗಲ್ಲುಶಿಕ್ಷೆ ಜಾರಿಯಾಗಿದೆ.
1971ರ ಯುದ್ಧ ಅಪರಾಧಗಳಿಗಾಗಿ ‘ಮೀರ್ಪುರದ ಕಟುಕ’ ಎಂದು ಕುಖ್ಯಾತಿ ಪಡೆದಿದ್ದ ಮುಲ್ಲಾ ತನ್ನ ವಿರುದ್ಧ ವಿಧಿಸಿದ್ದ ಮರಣದಂಡನೆ ಪ್ರಶ್ನಿಸಿ ಸಲ್ಲಿಸಿದ್ದ ಪುನರ್ಪರಿಶೀಲನಾ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಮುಜಮ್ಮಲ್ ಹುಸೇನ್ ತಳ್ಳಿಹಾಕಿದ್ದರು.
ಕೊನೆಯ ಗಳಿಗೆಯಲ್ಲಿ ಮುಲ್ಲ್ಲಾ ಪುನರ್ಪರಿಶೀಲನಾ ಅರ್ಜಿ ಸಲ್ಲಿಸಿದ ಕಾರಣ ಮರಣದಂಡನೆಯನ್ನು ತಡೆಹಿಡಿಯಲಾಗಿತ್ತು. ಆದರೆ, ಸುಪ್ರೀಂಕೋರ್ಟ್ ಮನವಿಯನ್ನು ತಳ್ಳಿಹಾಕಿದ ಕಾರಣ ಮುಲ್ಲಾ ನೇಣುಗಂಬಕ್ಕೆ ಏರಿದ್ದಾನೆ.
ಎರಡು ದಿನ ಮುಲ್ಲಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯದ ತೀರ್ಪು ಗುರುವಾರ ಹೊರಬೀಳಲಿದ್ದ ಕಾರಣ ಆವರಣ ಕಿಕ್ಕಿರಿದು ತುಂಬಿತ್ತು. ಹೀಗಾಗಿ ನ್ಯಾಯಾಲಯದ ಒಳಗೆ ಮತ್ತು ಹೊರಗೆ ವ್ಯಾಪಕ ಭದ್ರತೆ ಒದಗಿಸಲಾಗಿತ್ತು.
1971ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಹೋರಾಟದಲ್ಲಿ ಪಾಕಿಸ್ತಾನ ಸೇನೆಯ ಜೊತೆ ಕೈಜೋಡಿಸಿದ್ದ ಮುಲ್ಲಾನು, ಮಕ್ಕಳು ಸೇರಿ ನೂರಾರು ಜನರ ಸಾವಿಗೆ ಕಾರಣನಾಗಿದ್ದ. ಈ ಪ್ರಕರಣದ ಸಂಬಂಧ ಶಿಕ್ಷೆಗೆ ಒಳಗಾದ ನಾಲ್ಕನೇ ಜಮಾತ್ ನಾಯಕ ಹಾಗೂ ಮೊದಲ ರಾಜಕಾರಣಿ ಈತನಾಗಿದ್ದಾನೆ.