ಕೊಪ್ಪಳ: ಜಮೀನಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಜನರು ಆತಂಕಕ್ಕೆ ಒಳಗಾದ ಘಟನೆ ತಾಲ್ಲೂಕಿನ ಅರಸನಕೇರಿ ಗ್ರಾಮದಲ್ಲಿ ಬುಧವಾರ ನಡೆಯಿತು.
ಗ್ರಾಮದಿಂದ 2 ಕಿ.ಮೀ. ದೂರದ ಜಮೀನೊಂದರಲ್ಲಿ ಸುಮಾರು 300 ಮೀಟರ್ನಷ್ಟು ಬಿರುಕು ಕಾಣಿಸಿಕೊಂಡಿದ್ದರಿಂದ ಜನರು ಭೀತರಾದರು. ಈ ಸುದ್ದಿ ಹಬ್ಬುತ್ತಿದ್ದಂತೆಯೇ ಸುತ್ತಲಿನ ಜನ ತಂಡೋಪತಂಡವಾಗಿ ಗ್ರಾಮಕ್ಕೆ ಆಗಮಿಸಿ ಈ ವಿದ್ಯಮಾನವನ್ನು ಕುತೂಹಲದಿಂದ ವೀಕ್ಷಿಸಿದರು.
`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಗ್ರಾಮದ ಯುವಕ ಜಗದೀಶ ಹನುಮಗೌಡ್ರ, ನಿನ್ನೆ ಸಂಜೆ ದನ ಮೇಯಿಸುತ್ತಿದ್ದ ಕೆಲ ಹುಡುಗರು ಜಮೀನಿನಲ್ಲಿ ಬಿರುಕು ಬಿಟ್ಟಿರುವುದನ್ನು ನೋಡಿ ಭೀತರಾಗಿ, ಗ್ರಾಮದ ಹಿರಿಯರಿಗೆ ತಿಳಿಸಿದ್ದಾರೆ ಎಂದರು.
ಇಂದು ಮುಂಜಾನೆ ಈ ವಿಷಯ ಸುತ್ತಲಿನ ಗ್ರಾಮಗಳಿಗೆ ಗೊತ್ತಾಗಿ, ಜನರು ಗ್ರಾಮದತ್ತ ಬರುವುದು ಹೆಚ್ಚಾಯಿತು.
ಇದರಿಂದ ಆತಂಕಕ್ಕೆ ಒಳಗಾಗಿದ್ದ ಜನರು ನಿದ್ದೆ ಮಾಡಿಲ್ಲ. ಕೆಲವರಂತೂ ಬಂಧುಗಳಿಗೆ ಕರೆ ಮಾಡಿ ಆತಂಕವನ್ನು ತೋಡಿಕೊಳ್ಳುತ್ತಿದ್ದರು ಎಂದೂ ವಿವರಿಸಿದರು.
ಸಾಮಾನ್ಯ ವಿದ್ಯಮಾನ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಆರ್.ಎಸ್.ರಾವಳ್ ಅವರು, ಇದೊಂದು ಸಾಮಾನ್ಯ ವಿದ್ಯಮಾನವಾಗಿದ್ದು, ಇದರಿಂದ ಯಾವುದೇ ಅಪಾಯ ಇಲ್ಲ ಎಂದು `ಪ್ರಜಾವಾಣಿ'ಗೆ ತಿಳಿಸಿದರು.
`ಜನರು ಮಾತನಾಡಿಕೊಳ್ಳುತ್ತಿರುವಂತೆ ಇದು ಭೂಮಿಯಲ್ಲಿ ಕಂಡು ಬಂದ ಬಿರುಕು ಅಲ್ಲ. ಮಣ್ಣಿನ ಪದರಿನಲ್ಲಿ ಕಂಡು ಬಂದ ಬಿರುಕು. ಮಣ್ಣಿನಲ್ಲಿ ತೇವಾಂಶ ಕಡಿಮೆಯಾದಾಗ ಈ ರೀತಿ ಬಿರುಕುಗಳು ಕಂಡುಬರುವುದು ಸಾಮಾನ್ಯ' ಎಂದರು.
ಭೂಮಿಯ ಮೇಲ್ಮೈಯಲ್ಲಿ ಇಂತಹ ವಿದ್ಯಮಾನ ನಡೆಯುತ್ತಲೇ ಇರುತ್ತವೆ. ಇದರಿಂದ ಜನಜೀವನಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.