ಯಾದಗಿರಿ: ತಾಲ್ಲೂಕಿನ ಮುಷ್ಠೂರು ಗ್ರಾಮದ ರೈತರಿಂದ ಸಕ್ಕರೆ ಕಾರ್ಖಾನೆಗೆ ಖರೀದಿಸಿದ ಜಮೀನನ್ನು ಹಿಂದಿರುಗಿಸುವಂತೆ ಆಗ್ರಹಿಸಿ ಕರವೇ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಎಂಟು ವರ್ಷದ ಹಿಂದೆ ಗ್ರಾಮದಲ್ಲಿ ಕೀರ್ತಿ ಕಂಪೆನಿಯೊಂದು ಸಕ್ಕರೆ ಕಾರ್ಖಾನೆ ಸ್ಥಾಪಿಸಲು ರೈತರಿಂದ ಕಡಿಮೆ ಬೆಲೆಯಲ್ಲಿ ಜಮೀನು ಖರೀದಿಸಿದೆ. ಆಗ ಜಮೀನು ಕೊಟ್ಟ ರೈತರ ಕುಟುಂಬಕ್ಕೆ ವಸತಿ ಮತ್ತು ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಿಲ್ಲ. ಹೀಗಾಗಿ ಜಮೀನು ಕಳೆದುಕೊಂಡ ರೈತರ ಕುಟುಂಬಕ್ಕೆ ಆಸರೆ ಇಲ್ಲದೇ, ಅವರ ಬದಕು ಬೀದಿಗೆ ಬೀಳುವಂತಾಗಿದೆ. ಕಂಪೆನಿಯಿಂದ ಉದ್ಯೋಗ ಕೊಡಿಸಿ. ಇಲ್ಲವಾದಲ್ಲಿ ನಮ್ಮ ಜಮೀನು ಹಿಂದಿರುಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾವು ಕೊಟ್ಟ ಬೆಲೆಯನ್ನು ನೀಡಲು ರೈತರು ಸಿದ್ಧರಿದ್ದು, ಅವರಿಗೆ ಜಮೀನು ವಾಪಸ್ ಕೊಡಿಸಲು ಜಿಲ್ಲಾಡಳಿತ ಮಧ್ಯ ಪ್ರವೇಶಿಸಬೇಕು ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್. ಭೀಮುನಾಯಕ ಮನವಿ ಮಾಡಿದರು.
ಅರ್ಜುನ ಪವಾರ, ವೆಂಕಟೇಶ ಮಿಲ್ಟ್ರಿ, ಮಲ್ಲು ರಾಮಸಮುದ್ರ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.