ಕೋಲಾರ: ನಗರ ಹೊರವಲಯದ ತೇರಳ್ಳಿ ಬೆಟ್ಟದಲ್ಲಿ ಕೆಲವು ರೈತರು ಜಮೀನನ್ನೆ ತಾತ್ಕಾಲಿಕ ಕಣ ಆಗಿಸಿಕೊಂಡು ರಾಗಿ ಒಕ್ಕಣೆ ಮಾಡುತ್ತಿದ್ದರೆ, ಇನ್ನೂ ಕೆಲವರು ರಸ್ತೆಯನ್ನೇ ಕಣವನ್ನಾಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಮನೆ ಮುಂದಿನ ಪಡಸಾಲೆಯನ್ನೇ ಕಣವನ್ನಾಗಿಸಿಕೊಂಡಿದ್ದಾರೆ.
ಕಣಕ್ಕಾಗಿ ಜಾಗ ಮೀಸಲಿಡುವ ಪರಿಪಾಠ ಕಾಣೆಯಾದ ಪರಿಣಾಮ ಕಣಗಳೂ ಕಾಣೆಯಾಗಿವೆ. ರಸ್ತೆಗಳಲ್ಲೆ ಒಕ್ಕಣೆ ನಿರಂತರವಾಗಿ ನಡೆಯುತ್ತಿದೆ. ಕೆಲವೇ ರೈತರು ಮಾತ್ರ ಕೃಷಿ ಇಲಾಖೆ ನೀಡುವ ಕಣ ನಿರ್ಮಾಣ ಅನುದಾನ ಬಳಸಿಕೊಳ್ಳುತ್ತಿದ್ದಾರೆ.
ಕೆಲವರು ತಮ್ಮ ಜಮೀನಿನ ಸ್ವಲ್ಪ ಭಾಗವನ್ನೇ ತಾತ್ಕಾಲಿಕ ಕಣವನ್ನಾಗಿ ರೂಪಿಸಿ ಬೆಳೆ ಪ್ರತ್ಯೇಕಿಸುವ ಕಾಯಕ ನಡೆಸಿದ್ದಾರೆ. ಹಲವರು ಕಣದ ಬದಲು ರಸ್ತೆಗಳನ್ನೆ ಒಕ್ಕಣೆ ಕಣವನ್ನಾಗಿ ಪರಿವರ್ತಿಸಿ ಕೊಂಡಿದ್ದಾರೆ.
ರಸ್ತೆಯಲ್ಲಿ ಬೆಳೆ ರಾಶಿಯನ್ನು ಎಗ್ಗಿಲ್ಲದೆ ಸುರಿಯುವ ಪರಿಣಾಮ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದರೂ ರೈತರು ಬೆಳೆಯನ್ನು ಪಕ್ಕಕ್ಕೆ ಸರಿಸುವ ಕೆಲಸ ಮಾಡುತ್ತಿಲ್ಲ ಎಂಬುದು ನಗರದ ನಿವಾಸಿ ನಾಗರಾಜ್ ದೂರು.
ರಸ್ತೆಯನ್ನೆ ಒಕ್ಕಣೆ ಕಣವನ್ನಾಗಿ ಬಳಸುವ ರೈತರು ರಸ್ತೆಯ ಅಷ್ಟು ಅಗಲಕ್ಕೆ ಬೆಳೆ ಹರಡದೆ ದ್ವಿಚಕ್ರ ವಾಹನ ಸವಾರರಿಗೆ ಸ್ಥಳಾವಕಾಶ ನೀಡಿ ಒಕ್ಕಣೆ ಮಾಡುವುದು ಒಳಿತು ಎಂಬುದು ಅವರ ಸಲಹೆ.