ಮಡಿಕೇರಿ: ಜಮ್ಮೋ ಬಾಣೆಯ ಮಾಲೀಕತ್ವ ದೊರೆತಿರುವ ಹಿನ್ನೆಲೆಯಲ್ಲಿ ಕೊಡವ ಜನಾಂಗದವರು ಯಾವುದೇ ಕಾರಣಕ್ಕೂ ಜಮೀನನ್ನು ಪರಭಾರೆ ಮಾಡಬಾರದು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಕರೆ ನೀಡಿದರು.
ಇಲ್ಲಿನ ಕೊಡವ ಸಮಾಜದ ಆಶ್ರಯದಲ್ಲಿ ಭಾನುವಾರ ನಡೆದ ಪುತ್ತರಿ ಊರೊರ್ಮೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಮ್ಮಾ ಬಾಣೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾಗಿದೆ. ಜಮ್ಮೋ ಹಿಡುವಳಿ ಶತಮಾನಗಳಿಂದ ಬಳುವಳಿಯಾಗಿ ಬಂದಿದ್ದು, ಇದನ್ನು ಉಳಿಸಿಕೊಳ್ಳುವುದು ಅಗತ್ಯ ಎಂದರು.
ಕೊಡವ ಸಮಾಜದ ಅಧ್ಯಕ್ಷ ಮಾತಂಡ ಸುರೇಶ್ ಚಂಗಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕೊಡವ ಸಮಾಜದ ಉಪಾಧ್ಯಕ್ಷ ಮಂಡೇಪಂಡ ರತನ್ ಕುಟ್ಟಯ್ಯ ಸ್ವಾಗತ, ಕಾರ್ಯದರ್ಶಿ ಪೇರಿಯಂಡ ಪೆಮ್ಮಯ್ಯ, ಮಣವಟ್ಟೀರ ಚಿಣ್ಣಪ್ಪ, ನಂದೇಟಿರ ರಾಜ, ಕನ್ನಂಡ ಬೊಳ್ಳಪ್ಪ ಕಾರ್ಯಕ್ರಮ ನಿರೂಪಿಸಿದರು. ಸಮಾಜದ ಜಂಟಿ ಕಾರ್ಯದರ್ಶಿ ಕೇಕಡ ಗಣಪತಿ ವಂದಿಸಿದರು.