ಮಡಿಕೇರಿ: ಕೊಡಗಿನ ಜನರನ್ನು ಹಲವಾರು ವರ್ಷಗಳಿಂದ ಕಾಡುತ್ತಿರುವ ಜಮ್ಮಾ ಬಾಣೆ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಬಗೆಹರಿಯುವ ವಿಶ್ವಾಸ ತಮಗಿದೆ ಎಂದು ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಮ್ಮಾ ಬಾಣೆ ವಿಷಯವು ಕಳೆದ ಬಾರಿಯ ಸಚಿವ ಸಂಪುಟದಲ್ಲಿಯೇ ಚರ್ಚೆಗೆ ಬಂದಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಕುಮ್ಕಿ, ಇತರ ಜಮೀನುಗಳನ್ನು ಇದರಲ್ಲಿ ಸೇರ್ಪಡಿಸಲು ಪ್ರಯತ್ನಿಸಿದ್ದರಿಂದ ಪರಿಹಾರವಾಗದೇ ಕಗ್ಗಂಟಾಗಿಯೇ ಉಳಿಯಿತು ಎಂದರು.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರಿಗೆ ಕೊಡಗಿನ ಜಮ್ಮಾ ಬಾಣೆ ಸಮಸ್ಯೆಯ ನಿಜಸ್ಥಿತಿ ಗೊತ್ತಿದೆ. ಹೀಗಾಗಿ ಈ ಬಾರಿಯ ಸಭೆಯಲ್ಲಿ ಬಗೆಹರಿಯುವ ಸಾಧ್ಯತೆ ಇದೆ ಎಂದರು.
ಸಚಿವ ಸಂಪುಟದ ಉಪಸಮಿತಿಗೆ ಜಮ್ಮಾ ಬಾಣೆ ವಿಷಯವನ್ನು ವಹಿಸುವ ಸಾಧ್ಯತೆ ಇಲ್ಲ. ನೇರವಾಗಿ ಸಚಿವ ಸಂಪುಟವೇ ಇದರ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಿದರು.