ಬೆಂಗಳೂರು: `ಜಮ್ಮು ಮತ್ತುಕಾಶ್ಮೀರ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿದ್ದ ಮೂವರು ತಜ್ಞರ ತಂಡ ಸಲ್ಲಿಸಿರುವ ವರದಿ ದೇಶದ ಮತ್ತೊಂದು ವಿಭಜನೆಗೆ ನಾಂದಿಯಾಗುವಂತಿದೆ~ ಎಂದು `ಜಮ್ಮು ಮತ್ತು ಕಾಶ್ಮೀರ ಉಳಿಸಿ ಹೋರಾಟ ಸಮಿತಿ~ ಸದಸ್ಯರು ಆರೋಪಿಸಿದ್ದಾರೆ.
ಈ ವರದಿಯಲ್ಲಿರುವ ಅಂಶಗಳನ್ನು ವಿರೋಧಿಸಿ ಶುಕ್ರವಾರ ಪುರಭವನ ಎದುರು ಪ್ರತಿಭಟನೆ ನಡೆಸಿದ ಸಮಿತಿಯ ಸದಸ್ಯರು, `ಜಮ್ಮು ಮತ್ತು ಕಾಶ್ಮೀರದ ಗಡಿ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2010ರ ಅಕ್ಟೋಬರ್ 13ರಂದು ಪತ್ರಕರ್ತ ದಿಲೀಪ್ ಪಡಗಾಂವ್ಕರ್, ಪ್ರೊ. ರಾಧಾಕುಮಾರ್ ಮತ್ತು ಎಂ.ಎಂ ಅನ್ಸಾರಿ ಅವರನ್ನೊಳಗೊಂಡ ತಂಡ ರಚಿಸಿತ್ತು.
ಆ ತಂಡ 2011ರ ಅಕ್ಟೋಬರ್ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಆ ವರದಿಯನ್ನು ಏಳು ತಿಂಗಳುಗಳ ಕಾಲ ಗೌಪ್ಯವಾಗಿಟ್ಟಿದ್ದ ಸರ್ಕಾರ ಇತ್ತೀಚೆಗೆ ಬಹಿರಂಗಪಡಿಸಿದೆ. ಆ ವರದಿಯಲ್ಲಿರುವ ಅಂಶಗಳು ಪ್ರತ್ಯೇಕತಾವಾದಿಗಳ ಬೇಡಿಕೆಗೆ ಅಧಿಕೃತ ಮುದ್ರೆ ಒತ್ತಿದಂತಿದೆ~ ಎಂದು ಆರೋಪಿಸಿದರು.
`ತ್ರಿಸದಸ್ಯರ ತಂಡದಲ್ಲಿನ ಇಬ್ಬರು ಸದಸ್ಯರು ಐಎಸ್ಐ ಏಜೆಂಟ್ ಡಾ. ಗುಲಾಮ್ ಮಹಮ್ಮದ್ ಫಾಯಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ವರದಿಯ ವಿಶ್ವಾಸಾರ್ಹತೆ ಬಗ್ಗೆಯೇ ಸಂಶಯ ಮೂಡುತ್ತಿದೆ.
ರಾಜ್ಯಪಾಲರ ಹುದ್ದೆ ಹೆಸರನ್ನು `ಸದರ್-ಎ-ರಿಯಾಸತ್~ ಎಂದು ಮತ್ತು ಮುಖ್ಯಮಂತ್ರಿ ಹುದ್ದೆಯ ಹೆಸರನ್ನು `ವಜೀರ್-ಎ-ಅಜಾಮ್~ ಎಂದು ಬದಲಾಯಿಸಬೇಕು ಎಂದು ಈ ವರದಿಯಲ್ಲಿ ಹೇಳಿದ್ದಾರೆ. ಆದರೆ, ಈ ರೀತಿ ಉರ್ದು ಹೆಸರನ್ನು ಶಿಫಾರಸು ಮಾಡಿರುವುದು ಅನುಮಾನ ಮೂಡಿಸುತ್ತಿದೆ~ ಎಂದು ಪ್ರತಿಭಟನಾಕಾರರು ದೂರಿದ್ದಾರೆ.