ರೋಣ: ಜಮ್ಮು ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನೇಮಿಸಿದ ಸಂವಾದಕರ ವರದಿಯು ರಾಷ್ಟ್ರ ವಿರೋಧಿಯಾಗಿದ್ದು ಕೂಡಲೇ ವರದಿ ತಿರಸ್ಕರಿಸಿ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಮ್ಮು-ಕಾಶ್ಮೀರ ಉಳಿಸಿ ಹೋರಾಟ ಸಮಿತಿ ರೋಣ ತಾಲ್ಲೂಕು ಘಟಕದಿಂದ ಬುಧವಾರ ಬೃಹತ್ ಪ್ರತಿಭಟನಾ ಮೆರೆವಣಿಗೆ ನಡೆಯಿತು.
ಜಮ್ಮು ಕಾಶ್ಮೀರ ಹೋರಾಟ ಸಮಿತಿಯ ಕಾರ್ಯ ಕರ್ತರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಟೊ ಟಂ.ಟಂ ಚಾಲಕರು ಮತ್ತು ಮಾಲೀಕರನ್ನೊಳಗೊಂಡ ಬೃಹತ್ ಮೆರವಣಿಗೆ ಯೊಂದಿಗೆ ಇಲ್ಲಿನ ಸಿದ್ದಾರೂಢಮಠದಿಂದ ಪಟ್ಟಣದ ವಿವಿಧ ರಸ್ತೆಗಳ ಮೂಲಕ ಸೂಡಿ ವೃತ್ತ, ಮುಲ್ಲಾನ ಭಾವಿ ವೃತ್ತ ಹಾಗೂ ಪೊತ್ತರಾಜನ ಕಟ್ಟಿಯ ಹತ್ತಿರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಕೆಲ ಕಾಲ ವಾಹನ ಸಂಚಾರ ಸ್ಥಗಿತ ಗೊಂಡು ತೊಂದರೆಯಾಯಿತು.
ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಪ್ರಭಾರ ತಹಶೀಲ್ದಾರ ಎನ್.ಎಸ್.ಕೂಡಲರವರಿಗೆ ಮನವಿ ಸಲ್ಲಿಸಲಾಯಿತು. ನಂತರ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಭಾರತೀಯ ಕಿಸಾನ ಸಂಘದ ಉತ್ತರ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ಜಯರಾಮ್, ಸಂವಾದಕರ ತಂಡ 2011 ಅಕ್ಟೋಬರ್ನಲ್ಲಿ ನೀಡಿದ ವರದಿಯನ್ನು ಕೇಂದ್ರ ಸರಕಾರ ಏಳು ತಿಂಗಳು ತನ್ನಲ್ಲಿ ಗುಪ್ತವಾಗಿಟ್ಟುಕೊಂಡು ಕಳೆದ ಮೇ 24ರಂದು ಸಾರ್ವಜನಿಕರ ಮುಂದಿಟ್ಟಿದೆ. ಈ ವರದಿಯಲ್ಲಿ ಸಂವಾದಕರರು ಸೂಚಿಸಿದ ಸಲಹೆಗಳು ಭಯಾನಕವಾಗಿವೆ. ವರದಿಯು ರಾಷ್ಟ್ರ ನಿಷ್ಠೆಯನ್ನೇ ಪ್ರಶ್ನಾರ್ಥಕವಾಗಿ ನೋಡಿದೆ ಎಂದರು.