ಶ್ರೀನಗರ(ಐಎಎನ್ಎಸ್): ಬುಧವಾರ ರಾತ್ರಿ ಉತ್ತರ ಕಾಶ್ಮೀರ್ ದ ಬಂಡಿಪೋರ್ ಮತ್ತು ಗಂದೇರ್ ಬಲ್ ಜಿಲ್ಲೆಗಳಲ್ಲಿ ಹಿಮಗಡ್ಡೆಗಳ ಪ್ರವಾಹಕ್ಕೆ ಸಿಲುಕಿ ಭಾರತದ ಸೇನೆಯ ಒಟ್ಟು 11 ಮಂದಿ ಸೈನಿಕರು ಮೃತರಾಗಿದ್ದಾರೆಂದು ಸೇನೆಯ ಹಿರಿಯ ಅಧಿಕಾರಿಗಳು ಗುರುವಾರ ಇಲ್ಲಿ ತಿಳಿಸಿದ್ದಾರೆ.
ಬುಧವಾರ ರಾತ್ರಿ ಬಂಡಿಪೋರ್ ಉಪವಿಭಾಗದ ವ್ಯಾಪ್ತಿಗೆ ಬರುವ ಗುರೇಝ್ ನ ದಾವರ್ ಗ್ರಾಮದಲ್ಲಿರುವ ಸೇನಾ ನೆಲೆಯ ಮೇಲೆ ಹಿಮಗಡ್ಡೆಗಳು ಉರುಳಿದ ಪರಿಣಾಮವಾಗಿ ಎಂಟು ಜನ ಸೈನಿಕರು ಮೃತಪಟ್ಟಿದ್ದಾರೆ ಮತ್ತು ಇನ್ನೂ ಎಂಟು ಜನ ಸೈನಿಕರು ನಾಪತ್ತೆಯಾಗಿದ್ದಾರೆ ಎಂದು ಶ್ರೀನಗರದಲ್ಲಿರುವ 16 ನೇ ಸೇನಾ ತಂಡದ ವಕ್ತಾರ ಲೆಫ್ಟನೆಂಟ್.ಕರ್ನಲ್ ಜೆ.ಎಸ್.ಬ್ರಾರ್, ಅವರು ಈ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಇಲ್ಲಿಂದ 109 ಕಿ.ಮೀ ದೂರದಲ್ಲಿ ನಡೆದಿರುವ ಈ ಘಟನೆಯುಲ್ಲಿ ಅಲ್ಲಿನ ಸೇನಾ ನೆಲೆಯಲ್ಲಿದ್ದ 13 ಮಂದಿ ಸೈನಿಕರು ನಾಪತ್ತೆಯಾಗಿದ್ದಾರೆ, ಹಿಮಗಡ್ಡೆಯ ಅಡಿ ಸಿಲುಕಿಕೊಂಡಿರುವ ಎಂಟು ಜನ ಸೈನಿಕರ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದೂ ಅವರು ವಿವರ ನೀಡಿದ್ದಾರೆ.
ಇಲ್ಲಿಂದ 87 ಕಿ.ಮೀ ದೂರದ ಗಂದೇರ್ ಬಲ್ ಜಿಲ್ಲೆಯ ಸನ್ಮಾರ್ಗ ನಿಸರ್ಗ ಧಾಮದ ಮೇಲೆ ಬುಧವಾರ ರಾತ್ರಿ ಹಿಮಗಡ್ಡೆಗಳು ಉರುಳಿದಾಗ ಸೇನೆಯ ಅಧಿಕಾರಿಯೊಬ್ಬ ಸೇರಿ ಮೂವರು ಸೈನಿಕರು ಮೃತಪಟ್ಟಿದ್ದಾರೆ.
ಗಂದೇರ್ ಬಲ್ ಜಿಲ್ಲೆಯ ರಾಮವಾರಿ ಪ್ರದೇಶದಲ್ಲೂ ಗುರುವಾರ ರಾತ್ರಿ ಹಿಮಪಾತವಾಗಿದ್ದು ಅಲ್ಲಿನ ಗುಡಿಸಲುಗಳು ಜಖಂಗೊಂಡಿವೆ. ಆದರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಸಾಮಾನ್ಯವಾಗಿ ಅಲೆಮಾರಿ ಬುಡುಕಟ್ಟಿಗೆ ಸೇರಿರುವ ಕುರುಬರು ಬೇಸಿಗೆಯಲ್ಲಿ ಕುರಿಗಳುನ್ನು ಮೇಯಿಸಲು ಅಲ್ಲಿಗೆ ತೆರಳುತ್ತಾರೆ.
ಕಳೆದವಾರ ಗಂದೇರ್ ಬಲ್ ಜಿಲ್ಲೆಯಲ್ಲಿ ಹಿಮಗಡ್ಡೆಗಳಿಂದ ಆಗಬಹುದಾಗಿದ್ದ ಭಾರಿ ದುರ್ಘಟನೆಯೊಂದನ್ನು ಸೇನೆಯ ಅಧಿಕಾರಿಗಳು ತುರ್ತು ಕ್ರಮ ಜರುಗಿಸಿ ತಪ್ಪಿಸಿದ್ದರು. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗಳನ್ನು ಸೆಳೆಯುವ ಸನ್ಮಾರ್ಗ್ ನಿಸರ್ಗ ಧಾಮದ ಹತ್ತಿರದಲ್ಲಿ ಹರಿಯುವ ಸಿಂಧ ಹೊಳೆಯಲ್ಲಿ ಬಿದ್ದ ಭಾರಿಗಾತ್ರದ ಹಿಮಬಂಡೆಯೊಂದು ನೀರ ಹರಿವನ್ನು ತಡೆದಿತ್ತು. ಅದರಿಂದ ದೊಡ್ಡ ಪ್ರಮಾಣದಲ್ಲಿ ತಗ್ಗು ಪ್ರದೇಶಗಳಲ್ಲಿ ಹಿಮನದಿಯ ಬಗೆಯಲ್ಲಿ ನೀರು ನುಗ್ಗಿ ಅಪಾಯ ಉಂಟಾಗಬಹುದಾಗಿತ್ತು. ಆ ಸಮಯದಲ್ಲಿ ಸೇನೆಯು ನಿಧಾನವಾಗಿ ಹಿಮಬಂಡೆಯನ್ನು ಕರಗಿಸಿ ಮುಂದಾಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.