ನವದೆಹಲಿ (ಪಿಟಿಐ): ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಆರೋಪಿಯಾಗಿದ್ದ ಅವ್ಯವಹಾರದ ಪ್ರಕರಣವೊಂದನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿರುವ ಕ್ರಮ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಮೇಲ್ಮನವಿ ಕುರಿತಂತೆ ಸುಪ್ರೀಂ ಕೋರ್ಟ್ ಜಯಲಲಿತಾ ಅವರಿಗೆ ಮಂಗಳವಾರ ನೋಟಿಸ್ ನೀಡಿದೆ.
ಸುಪ್ರೀಂಕೋರ್ಟ್ ಈ ನೋಟಿಸ್ ನೀಡಿದ್ದರೂ ಮದ್ರಾಸ್ ಹೈಕೋರ್ಟ್ 2011ರ ಸೆ. 30ರಂದು ಈ ಪ್ರಕರಣವನ್ನು ವಜಾ ಮಾಡಿರುವ ತೀರ್ಪಿಗೆ ತಡೆಯಾಜ್ಞೆ ನೀಡಿಲ್ಲ. 1992ರಲ್ಲಿ ಅಕ್ರಮವಾಗಿ ನಡೆದಿದೆ ಎನ್ನಲಾದ ಮೂರು ಲಕ್ಷ ಡಾಲರ್ಗಳ ಡಿಮ್ಯಾಂಡ್ ಡ್ರಾಫ್ಟ್ (ಡಿ.ಡಿ) ವಹಿವಾಟಿನಲ್ಲಿ ಜಯಲಲಿತಾ ಅವರ ಪಾತ್ರವಿದೆ ಎಂದು ಸಿಬಿಐ ಆಪಾದಿಸಿತ್ತು.
ಆದರೆ, ಪ್ರಕರಣ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್; ಪ್ರಕರಣದ ತನಿಖೆ ಮತ್ತು ವಿಚಾರಣೆಯಲ್ಲಿ ಮಿತಿಮೀರಿದ ವಿಳಂಬ ಆಗಿದೆ ಎಂದು ಜಯಲಲಿತಾ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ದಾಖಲಾಗಿದ್ದ ಎಫ್ಐಆರ್ ರದ್ದುಗೊಳಿಸಿತ್ತು.