ಪುಣೆ (ಐಎಎನ್ಎಸ್): ಜರ್ಮನ್ ಬೇಕರಿ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಏಕೈಕ ಭಯೋತ್ಪಾದಕ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಹಿಮಾಯತ್ ಬೇಗ್ಗೆ ಇಲ್ಲಿನ ಸೆಷನ್ ನ್ಯಾಯಾಲಯವು ಗುರುವಾರ ಮರಣ ದಂಡನೆ ಶಿಕ್ಷೆ ವಿಧಿಸಿತು.
17 ಜನರು ಸತ್ತು, 64 ಜನರು ಗಾಯಗೊಂಡಿದ್ದ ಈ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಬೇಗ್ ವಿರುದ್ಧ ಹೊರಿಸಲಾಗಿದ್ದ ಕೊಲೆ, ಕ್ರಿಮಿನಲ್ ಸಂಚು ಮತ್ತು ಇತರ ಆಪಾದನೆಗಳು ಸಾಬೀತಾಗಿವೆ ಎಂದು ಹೇಳಿ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಎನ್. ಪಿ. ಧೋತೆ ಅವರು ಮೂರು ದಿನಗಳ ಹಿಂದೆಯಷ್ಟೇ ಬೇಗ್ ಅಪರಾಧಿ ಎಂದು ತೀರ್ಪು ನೀಡಿದ್ದರು.
2010ರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಏಳು ಭಯೋತ್ಪಾದಕರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಅವರ ಪೈಕಿ ಬೇಗ್ನನ್ನು ಮಾತ್ರ ಬಂಧಿಸಲಾಗಿದೆ. ಇತರ ಭಯೋತ್ಪಾದಕರಾದ ಯಾಸಿನ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಮೊಹಿಸಿನ್ ಚೌಧರಿ, ರಿಯಾಜ್ ಭಟ್ಕಳ್ ಮತ್ತು ಫಯಾಜ್ ತಲೆ ಮರೆಸಿಕೊಂಡಿದ್ದಾರೆ.