ಬೆಂಗಳೂರು: ಬೆಂಗಳೂರು ಜಲಮಂಡಲಿಯಲ್ಲಿ ನಡೆದ ಬಹುಕೋಟಿ ರೂಪಾಯಿ ಮೊತ್ತದ ಕೊಳವೆ ಬಾವಿ ಸಾಮಗ್ರಿ ಖರೀದಿಯಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.
ಇಲಾಖೆಯು ಉಪಕರಣ ಖರೀದಿಯಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರ, ಖರೀದಿ ಪ್ರಕ್ರಿಯೆ ಉಲ್ಲಂಘನೆ ಹಾಗೂ ಕಡತಗಳ ನಿರ್ವಹಣೆಯಲ್ಲಿ ನಡೆದಿರುವ ಫೋರ್ಜರಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ವಿವರವಾದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರನ್ನು ಕೋರಿದೆ.
ನಗರದಲ್ಲಿ ಒಟ್ಟು 3451 ಕೊಳವೆ ಬಾವಿಗಳು ಕಾರ್ಯ ನಿರ್ವಹಿಸುತ್ತಿದ್ದು ಇವುಗಳಿಗೆ ಸಂಬಂಧಪಟ್ಟ ಉಪಕರಣ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿರುವ ಬಗ್ಗೆ `ಪ್ರಜಾವಾಣಿ~ ವಿಶೇಷ ವರದಿ ಪ್ರಕಟಿಸಿತ್ತು.
ಜಲಮಂಡಲಿಯ ವಿಶೇಷ ಲೆಕ್ಕ ಪರಿಶೋಧನಾ ವಿಭಾಗ ಸಹ ತನಿಖೆ ನಡೆಸಿ 5.46 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿತ್ತು. ಆಗಸ್ಟ್ನಲ್ಲಿ ಜಲಮಂಡಲಿ ಅಧ್ಯಕ್ಷರು ಹಗರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುವಂತೆ ಇಲಾಖೆಗೆ ಮನವಿ ಸಲ್ಲಿಸಿದ್ದರು.