ಶಿವಮೊಗ್ಗ: ಜಲಮೂಲಗಳು ಅಳಿವಿನಂಚಿನಲ್ಲಿದ್ದು, ಮುಂದಿನ ದಿನಗಳು ಅಪಾಯಕಾರಿಯಾಗಿ ಪರಿಣಮಿಸಲಿವೆ ಎಂದು ಪರಿಸರವಾದಿ ಪ್ರೊ.ಬಿ.ಎಂ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಭಾಗದ ಭೀಮನಮಡುವಿನಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಜಿಲ್ಲಾ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ಜಲಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೈಗಾರಿಕೆಗಳು ಉಗುಳುವ ವಿಷಕಾರಿ ವಸ್ತುಗಳಿಂದ ಜಲಮೂಲಗಳೇ ನಾಶವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಜಲಜಾಗೃತಿ ಮೂಡಿಸುವ ತುರ್ತಿದೆ ಎಂದು ಅಭಿಪ್ರಾಯಪಟ್ಟರು.
ಸಂಘದ ಅಧ್ಯಕ್ಷ ಪಾಲಾಕ್ಷಪ್ಪ ಯಡೆಹಳ್ಳಿ, ಜ. 23ರವರೆಗೆ ನಡೆಯುವ ಈ ಅಭಿಯಾನದಲ್ಲಿ ಜಿಲ್ಲೆಯಲ್ಲಿ ಸಿಗುವ ಎಲ್ಲ ಮೂಲಗಳ ನೀರನ್ನು ಸಂಗ್ರಹಿಸಿ, ಫೆ. 4ರಂದು ಉಜ್ಜಯನಿಯಲ್ಲಿ ನಡೆಯುವ ರಾಷ್ಟ್ರೀಯ ಅಧಿವೇಶನಕ್ಕೆ ಕೊಂಡಯ್ಯಲಾಗುವುದು ಎಂದರು.
ಸಂಘದ ಪದಾಧಿಕಾರಿಗಳಾದ ವೈ.ಆರ್. ಮಲ್ಲಿಕಾರ್ಜುನ ಯಲವಟ್ಟಿ, ಕೆ.ಆರ್. ಮಲ್ಲಿಕಾರ್ಜುನ, ಅರವಿಂದ ಹಸೂಡಿ ಮತ್ತಿತರರು ಉಪಸ್ಥಿತರಿದ್ದರು.