ತುರುವೇಕೆರೆ: ತಾಲ್ಲಾಕಿನ ಶೆಟ್ಟಿಗೊಂಡನ ಹಳ್ಳಿ, ಸೀಗೆಹಳ್ಳಿ, ಮಣಿಚೆಂಡೂರು ಪಂಚಾಯ್ತಿಗಳಿಗೆ ಸಮಗ್ರ ಜಲಾನಯನ ಅಭಿವೃದ್ಧಿ ಯೋಜನೆಯಡಿ 5.5 ಕೋಟಿ ರೂಪಾಯಿಗಳ ಕಾಮಗಾರಿ ಹಮ್ಮಿ ಕೊಳ್ಳಲಾಗುವುದು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಪ್ರಕಟಿಸಿದರು.
ಗುರುವಾರ ಸೀಗೇಹಳ್ಳಿಯಲ್ಲಿ ನಡೆದ ಶೆಟ್ಟಿಗೊಂಡನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಕಾಮಗಾರಿಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಂಷಾ ಪಾತ್ರದಲ್ಲಿ ಸಾಕಷ್ಟು ನೀರಿಲ್ಲದ ಕಾರಣ ಈ ಭಾಗದ ಗ್ರಾಮಗಳಿಗೆ ಕುಡಿಯುವ ನೀರಿಗೂ ತತ್ವಾರವಾಗಿತ್ತು. ಹೇಮಾವತಿ ಡಿ- 13ನಾಲೆಯ ಮೂಲಕ ಈ ಭಾಗದ ಕೆರೆಗಳಿಗೆ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಸ್ಟೆಪ್ಸ್ ಯೋಜನೆಯ ಮೂಲಕ 19 ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
ಜಿ.ಪಂ. ಸದಸ್ಯ ಶ್ರಿನಿವಾಸ್ ಸಮಾರಂಭ ಉದ್ಘಾಟಿಸಿದರು. ತಾ.ಪಂ. ಅಧ್ಯಕ್ಷೆ ಪದ್ಮಾವತಿ ವೆಂಕಟೇಶ್, ಸೀಗೆಹಳ್ಳಿ ಗ್ರಾ.ಪಂ. ಅಧ್ಯಕ್ಷೆ ವಸಂತಾ ಚಂದ್ರಶೇಖರ್, ತಾ.ಪಂ. ಸದಸ್ಯೆ ಕುಮಾರಿ ಕಾಂತರಾಜ್, ಇಒ ಎಚ್.ಕೆ. ಪ್ರಕಾಶ್, ಸಿಡಿಪಿಒ ಸೋಮಸುಂದರ್, ಪರಶುರಾಂ, ಪ್ರಕಾಶ್ ಇತರರು ಉಪಸ್ಥಿತರಿದ್ದರು.
ತುಯಿಲಹಳ್ಳಿಯ ಕೊಳವೆ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಹರಳಕೆರೆ ಮತ್ತು ಚಟ್ಟನಹಳ್ಳಿಯ ಅಂಗನವಾಡಿ ಕಟ್ಟಡ, ಸೀಗೆಹಳ್ಳಿ ಗ್ರಾ.ಪಂ. ವಸತಿ ಗೃಹ ಕಟ್ಟಡ, ಸಮಗ್ರ ಜಲಾನಯನ ನಿರ್ವಹಣಾ ಯೋಜನಾ ಕಚೇರಿಗಳನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಿದರು.