ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲ್ಲೂಕಿನ ಕುರುಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಜಲಹಳ್ಳಿಯಲ್ಲಿ ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಗಾಜಲ ಗ್ರಾಮಸ್ಥರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
`ಜಲ್ಲಿ ಕ್ರಷರ್ ಘಟಕದ ಸ್ಥಾಪನೆಯಿಂದ ಇಡೀ ಪರಿಸರ ಹಾಳಾಗುತ್ತದೆ. ಇಂತಹ ದುಷ್ಪರಿಣಾಮಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು~ ಎಂದು ಆಗ್ರಹಿಸಿದರು.
ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿ ಸದಸ್ಯ ಕೆ.ಸಿ.ಶಂಕರೇಗೌಡ ಮಾತನಾಡಿ, `ಜಲ್ಲಿ ಕ್ರಷರ್ ಅಕ್ರಮ ಗಣಿಗಾರಿಕೆಗೆ ಆಸ್ಪದ ಮಾಡಿಕೊಡುತ್ತದೆ.
ಬೆಟ್ಟಗುಡ್ಡಗಳಿಂದ ಹರಿಯುವ ನೀರು ಮಲಿನಗೊಳ್ಳುತ್ತದೆ. ಇದರ ಪರಿಣಾಮ ಗಾಜಲಹಳ್ಳಿ ಮರುಭೂಮಿಯಾಗಿ ರೂಪುಗೊಳ್ಳಲಿದೆ. ಹಣ್ಣು, ತರಕಾರಿ, ಹಿಪ್ಪುನೇರಳೆ ಬೆಳೆಯುವ ರೈತರಿಗೆ ಸಮಸ್ಯೆಯಾಗಲಿದೆ ಎಂದು ಹೇಳಿದರು.
`ಗ್ರಾಮ, ಪರಿಸರಕ್ಕೆ ಧಕ್ಕೆ ಉಂಟು ಮಾಡುವಂತಹ ಜಲ್ಲಿ ಕ್ರಷರ್ ಘಟಕ ಸ್ಥಾಪನೆಗೆ ಗ್ರಾಮಸ್ಥರು ಒಪ್ಪುವುದಿಲ್ಲ. ಬದುಕನ್ನು ಬರಡಾಗಿಸಿಕೊಳ್ಳಲು ಇಚ್ಛಿಸುವುದಿಲ್ಲ. ಬೆಟ್ಟಗುಡ್ಡಗಳ ಸ್ಫೋಟದಿಂದ ತೊಂದರೆಯಾಗುತ್ತದೆ. ಗ್ರಾಮಸ್ಥರ ಆರೋಗ್ಯದೊಂದಿಗೆ ಚೆಲ್ಲಾಟ ಬೇಡ~ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾ ಉಸ್ತುವಾರಿ ಸಚಿವ ಎ.ನಾರಾಯಣಸ್ವಾಮಿ ಅವರಿಗೆ ಮನವಿಪತ್ರ ಸಲ್ಲಿಸಿದರು. ಕುರುಬೂರು ಗ್ರಾ.ಪಂ. ಅಧ್ಯಕ್ಷ ವೆಂಕಟಸ್ವಾಮಿ, ಸದಸ್ಯರಾದ ಚಂದ್ರಕಲಾ, ಶಿವಣ್ಣ, ಪ್ರಭಾಕರ, ಮುಖಂಡರಾದ ರವಿ, ಮುನಿರಾಜು, ಗಂಗುಲಪ್ಪ, ಗಂಗಪ್ಪ, ಮುನಿಯಪ್ಪ, ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಿದ್ದರು.