ದಾವಣಗೆರೆ: `ಸುವರ್ಣ ವಸ್ತ್ರನೀತಿ~ ಜಾರಿಗೆ ಬಂದ ಮೇಲೆ ಕರ್ನಾಟಕದಲ್ಲಿ ಜವಳಿ ಕ್ಷೇತ್ರಕ್ಕೆ ಸುಮಾರು ರೂ 3,500 ಕೋಟಿಗೂ ಹೆಚ್ಚು ಹೂಡಿಕೆ ಬಂದಿದ್ದು, ಬಂಡವಾಳ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನಾ ನಿರ್ದೇಶಕ ವಿಜಯಕುಮಾರ್ ಬಿ. ನಿರಾಳೆ ಹೇಳಿದರು.
ನಗರದಲ್ಲಿ ಸೋಮವಾರ ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯ್ತಿ, ಛೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ನಡೆದ `ಸುವರ್ಣ ವಸ್ತ್ರನೀತಿ 2008 -13~ರ ಅಡಿಯಲ್ಲಿ ಜವಳಿ ಉದ್ದಿಮೆದಾರರಿಗೆ ಒಂದು ದಿನದ `ಉದ್ಯಮಶೀಲತಾ ಕಾರ್ಯಾಗಾರ~ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜವಳಿ ಉತ್ಪಾದನೆಯಲ್ಲಿ ಚೀನಾ ಮೊದಲ ಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ. 35 ಮಿಲಿಯನ್ ಜನರಿಗೆ ಉದ್ಯೋಗ ನೀಡಿದೆ. ಇನ್ನು ಶೇ. 10ರಷ್ಟಾದರೂ ಪ್ರಗತಿ ಸಾಧಿಸಬೇಕು ಎಂದರು.
ವಿಶ್ವ ಆರ್ಥಿಕ ಹಿಂಜರಿತ ಉತ್ಪಾದನಾ ಕ್ಷೇತ್ರಕ್ಕೆ ಹೊಡೆತ ನೀಡಲಿಲ್ಲ. ರೇಷ್ಮೆ ಉತ್ಪಾದನೆಯಲ್ಲಿಯೂ ದೇಶ ಮೊದಲ ಸ್ಥಾನದಲ್ಲಿದೆ. ದೇಶದ ರೇಷ್ಮೆ ಒಟ್ಟು ಉತ್ಪಾದನೆಯ ಶೇ. 65ರಷ್ಟು ಕರ್ನಾಟಕದಲ್ಲಿಯೇ ಉತ್ಪಾದನೆಯಾಗುತ್ತಿದೆ. ಎಲ್ಲ ದೃಷ್ಟಿಯಲ್ಲಿ ಜವಳಿ ಉದ್ಯಮಕ್ಕೆ ದಾವಣಗೆರೆ ಪ್ರಶಸ್ತವಾದ ಸ್ಥಳವಾಗಿದೆ.
ಮುಂದಿನ 5 ವರ್ಷಗಳಲ್ಲಿ ಬೆಂಗಳೂರಿನಿಂದ ಈ ಉದ್ಯಮಗಳು 2 ಮತ್ತು 3ನೇ ಹಂತದ ನಗರಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ದಾವಣಗೆರೆಯಲ್ಲಿ ಉದ್ದಿಮೆ ಮತ್ತೆ ಪುನರುತ್ಥಾನಗೊಳ್ಳಬೇಕು. ಇಲ್ಲಿ ಕೈಗಾರಿಕೆ, ವಿಮಾನ ಇಳಿದಾಣ ಸ್ಥಾಪಿಸಲು ಮುಂದಾದಾಗ ಹಲವಾರು ಅಡಚಣೆಗಳು ಎದುರಾದವು. ಹಾಗೆಂದು ಯಾರೂ ಹಿಂಜರಿಯಬೇಕಾಗಿಲ್ಲ ಎಂದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ಶಾಸಕ ಎಂ. ಬಸವರಾಜ ನಾಯ್ಕ, ಮೇಯರ್ ಎಂ.ಎಸ್. ವಿಠ್ಠಲ್, ಹುಬ್ಬಳ್ಳಿಯ ಕರ್ನಾಟಕ ರಾಜ್ಯ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಹಿರೇಮಠ, ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಕಾಸಲ್ ಎಸ್. ವಿಠ್ಠಲ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ, ನಾಗರಾಜ ಸಿ. ಚವ್ಹಾಣ್, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಸಪಾರೆ ಶ್ರೀನಿವಾಸ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.