ಕೋಲಾರ: ಸಂಪನ್ಮೂಲ ವ್ಯಕ್ತಿಗಳು ಪ್ರಾಥಮಿಕ ಶಿಕ್ಷಣದ ಬಗ್ಗೆ ಸಂಪೂರ್ಣ ಅರಿವು ಹೊಂದಿರಬೇಕು. ಶಿಕ್ಷಕರಿಗೆ ಸ್ನೇಹಿತರಂತೆ ಮಾರ್ಗದರ್ಶನ ನೀಡ ಬೇಕು. ಸರ್ಕಾರಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ನೆರವಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ) ಆಂಜನೇಯ ರೆಡ್ಡಿ ಹೇಳಿದರು.
ಸರ್ವಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ, ನೂತನ ಸಮೂಹ ಸಂಪನ್ಮೂಲ ವ್ಯಕ್ತಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರತಿ ವಿಷಯದ ಬಗ್ಗೆ ಸತತವಾದ ಓದು-ಗ್ರಹಿಕೆ, ಮನನ ಮಾಡಿಕೊಂಡು ತರಬೇತಿಯನ್ನು ನೀಡುವ, ನಾಯಕತ್ವ ವಹಿಸಬೇಕಾದ ಸಂಪನ್ಮೂಲ ವ್ಯಕ್ತಿಗಳು ಕ್ರಿಯಾಶೀಲರಾಗಬೇಕು ಎಂದರು.
ಬಿಇಒ ಕೆ.ಎಸ್. ನಾಗರಾಜಗೌಡ ಮಾತನಾಡಿ, ಪ್ರತಿ ಶಾಲೆಯಲ್ಲೂ ಜೂ.5ರಂದು ಸಸಿ ನೆಡುವುದರ ಮೂಲಕ ಪರಿಸರ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಬೇಕು. ನೂತನ ಸಮೂಹ ಸಂಪನ್ಮೂಲ ಕೇಂದ್ರ ಗಳನ್ನು ಗಟ್ಟಿಗೊಳಿಸಲು ಕ್ರಿಯಾ ಯೋಜನೆ ತಯಾರಿಸಿಕೊಂಡು ಶಿಕ್ಷಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ. ಎಡ್ವಿನ್ ಕ್ರಿಸ್ಟೋಫರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಸರ್ವ ಶಿಕ್ಷಣ ಅಭಿಯಾನ ಸಂಪನ್ಮೂಲ ವ್ಯಕ್ತಿಗಳಾದ ಜಿ.ಶ್ರೀನಿವಾಸ್, ಆರ್. ಆನಂದ ಕುಮಾರ್, ಎಲ್.ಉಷಾರಾಣಿ, ಉಪಸ್ಥಿತರಿದ್ದರು.
ನೂತನ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸೂಲೂರು ಎಂ. ಚಂದ್ರಪ್ಪ, ಕುರಗಲ್ ನಾರಗಾಜಪ್ಪ, ಮುದುವಾಡಿ ನಾಗರಾಜ, ಬೆಳ ಮಾರನಹಳ್ಳಿ ನಾಗರಾಜ, ಹುತ್ತೂರು ಪದ್ಮ, ಕಾಡಹಳ್ಳಿ ಜೆ.ರಘು ರಾಮಯ್ಯಶೆಟ್ಟಿ, ಐತರಾಸನಹಳ್ಳಿ ಸುಬ್ರಮಣಿ, ಕೋಡಿಕಣ್ಣೂರು ಬಿ.ಎಸ್.ವೀಣಾ, ಮುದುವತ್ತಿ ಸಿ.ಎಂ. ನಾರಾಯಣಸ್ವಾಮಿ, ಉರ್ದುನ ಸೈಯದ್ ನೂರುದ್ದೀನ್, ಶಾತಾಜ್ ಹಾಜರಿದ್ದರು.