ಬಸವಕಲ್ಯಾಣ: ಇಲ್ಲಿನ ಸೋಮವಾರ ಪೇಟೆಯಲ್ಲಿನ ಹನುಮಾನ ದೇವಸ್ಥಾನಕ್ಕೆ ಸಂಬಂಧಿಸಿದ ಸ್ಥಳದ ವಿಸ್ತೀರ್ಣವನ್ನು ತಪ್ಪಾಗಿ ನಮೂದಿಸಿ ಜಾಗ ಕಬಳಿಸಲು ಯತ್ನಿಸಿದ್ದರಿಂದ ರೋಷಗೊಂಡ ನಾಗರಿಕರು ಬುಧವಾರ ನಗರಸಭೆ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.
ಈ ಮೊದಲು ಜಾಗದ ವಿಸ್ತೀರ್ಣವನ್ನು ಸರಿಯಾಗಿಯೇ ನಮೂದಿಸಲಾಗಿತ್ತು. ಆದರೆ ಈಚೆಗೆ ಇಲ್ಲಿ ಆವರಣಗೋಡೆ ನಿರ್ಮಿಸುತ್ತಿದ್ದಾಗ ನಗರಸಭೆಯವರು ತಪ್ಪು ಮಾಹಿತಿ ಒದಗಿಸಿದ್ದಾರೆ. ನೂರಾರು ಅಡಿಯಷ್ಟು ಜಾಗ ದೇವಸ್ಥಾನದ ಹೆಸರಲ್ಲಿದ್ದರೂ ದಾಖಲೆಗಳಲ್ಲಿ ತಿದ್ದುಪಡಿ ಮಾಡಿ ಸ್ವಲ್ಪವೇ ಜಾಗವಿದೆ ಎಂದು ತೋರಿಸಲಾಗಿದೆ.
ಈ ಕೃತ್ಯ ನಗರಸಭೆಯ ನೌಕರರೊಬ್ಬರು ಮಾಡಿರುವುದು ಸ್ಪಷ್ಟವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಇಂಥ ಕೆಲಸ ಮಾಡಿದ ನೌಕರನ ವಿರುದ್ಧ ಕ್ರಮ ಜರುಗಿಸಬೇಕು ಎಂದೂ ಕಚೇರಿಯಲ್ಲಿದ್ದ ಪೌರಾಯುಕ್ತರಿಗೆ ಆಗ್ರಹಿಸಲಾಯಿತು.
ನಗರಸಭೆ ಸದಸ್ಯ ಸೂರ್ಯಕಾಂತ ಚಿಲ್ಲಾಬಟ್ಟೆ, ಪ್ರಮುಖರಾದ ಅರವಿಂದ ಮುತ್ತೆ, ಶ್ರೀನಿವಾಸ ಸದಾನಂದೆ, ರಮೇಶ ಕಾಂಬಳೆ, ನಂದಕುಮಾರ ಉದಗಿರೆ, ಅಣ್ಣೆಪ್ಪ ಗುದಗೆ, ನಾಗಣ್ಣ ತಡಕಲ್ಲೆ, ವಿರಾಮ ಕರಾಡೆ, ಹಣಮಂತ ಅಂಬಲಗೆ, ರಾಜೇಂದ್ರ ಗೋಸಾಯಿ, ಶಿಖರೇಶ್ವರ ಗೋಕಳೆ, ಸಂತೋಷ ಕುಂಬಾರ, ನಾಗನಾಥ ಡೋಳ್ಳೆ ಮುಂತಾದವರು ಪಾಲ್ಗೊಂಡಿದ್ದರು. ಈ ಸಂಬಂಧ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೌರಾಯುಕ್ತರು ಭರವಸೆ ಕೊಟ್ಟಿದ್ದರಿಂದ ಪ್ರತಿಭಟನೆ ಅಂತ್ಯಗೊಂಡಿತು.