ವಾಷಿಂಗ್ಟನ್ (ಪಿಟಿಐ): ಸದ್ಯದ ಜಾಗತಿಕ ಆರ್ಥಿಕ ಅಸ್ಥಿರತೆಗೆ `ಯೂರೋಪ್~ ಕೇಂದ್ರ ಬಿಂದುವಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯೂರೋಪ್ ಒಕ್ಕೂಟದಲ್ಲಿ ಕಾಣಿಸಿಕೊಂಡಿರುವ ಸಾಲ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟು ಜಗತ್ತಿನ ಇತರ ಭಾಗಗಳಿಗೂ ತೀವ್ರವಾಗಿ ವ್ಯಾಪಿಸಿದೆ. ಇದರ ಪರಿಣಾಮಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಮತ್ತು ಬಡ ದೇಶಗಳ ಮೇಲೆ ಹೆಚ್ಚಾಗಿ ಕಾಣಿಸಿಕೊಂಡಿವೆ ಎಂದು ಸಿಂಗಪುರದ ಹಣಕಾಸು ಸಚಿವ ಟಿ. ಷಣ್ಮುಗರತ್ನಂ ಅಭಿಪ್ರಾಯಪಟ್ಟಿದ್ದಾರೆ.
ಸದ್ಯಕ್ಕೆ, ಜಗತ್ತು ದುರ್ಬಲ ಆರ್ಥಿಕತೆಯ ಜತೆಗೆ ತೀವ್ರತರವಾದ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ. ಈ ಪರಿಸ್ಥಿತಿಯು ಹೂಡಿಕೆದಾರರ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಆರ್ಥಿಕ ಆತ್ಮವಿಶ್ವಾಸದ ಕೊರತೆಯಿಂದ ಸಮರ್ಪಕವಾದ ನೀತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ವಿಶ್ವಾಸಾರ್ಹತೆಯ ಕೊರತೆ ಗಮನಾರ್ಹವಾಗಿ ಕಾಣುತ್ತಿದೆ ಎಂದರು. ಇಲ್ಲಿ ನಡೆದ `ಐಎಂಎಫ್~ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಯೂರೋಪ್ ಒಕ್ಕೂಟದಲ್ಲಿ ಕಾಣಿಸಿಕೊಂಡಿರುವುದು ಇಡೀ ವಿಶ್ವದ ಸಮಸ್ಯೆ. ಯಾವುದೇ ಒಂದು ದೇಶವೂ ಇದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅಂತರರಾಷ್ಟೀಯ ಸಮುದಾಯ ಜಾಗತಿಕ ಆರ್ಥಿಕ ಬಿಕ್ಕಟ್ಟು ತಡೆಗೆ ಸಂಘಟಿತ ಪ್ರಯತ್ನ ನಡೆಸಬೇಕು ಎಂದೂ ಅವರು ಹೇಳಿದರು.