ನವದೆಹಲಿ, (ಪಿಟಿಐ): `ಪ್ರಮುಖ ರಾಷ್ಟ್ರಗಳು ತಮ್ಮದೇ ಸಮಸ್ಯೆಗಳತ್ತ ಹೆಚ್ಚಿನ ಗಮನ ಹರಿಸಿರುವುದರಿಂದ ಜಾಗತಿಕ ಸಮಸ್ಯೆಯ ಬಗ್ಗೆ ಸಂಘಟಿತ ಪ್ರಯತ್ನ ಕಡಿಮೆಯಾಗಿದೆ. ಆದ್ದರಿಂದ ಭಾರತ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಸಮಸ್ಯೆಗಳನ್ನು ತಾನೇ ಬಗೆಹರಿಸಿಕೊಳ್ಳಬೇಕಾಗಿದೆ~ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಸಶಸ್ತ್ರ ಪಡೆಗಳ ಉನ್ನತ ಕಮಾಂಡರ್ಗಳ ಸಭೆಯನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಭಯೋತ್ಪಾದಕ ಸಂಘಟನೆಗಳು ಈಗ ಹೆಚ್ಚು ಸಂಘಟಿತವಾಗಿ ಉನ್ನತ ತಂತ್ರಜ್ಞಾನಗಳನ್ನು ಬಳಸುತ್ತಿರುವುದರಿಂದ ಅವುಗಳನ್ನು ನಿಯಂತ್ರಿಸಲು ನಾವು ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ ಎಂದರು.
ಸೈಬರ್ ಮತ್ತು ಮಾಹಿತಿ ತಂತ್ರಜ್ಞಾನದ ಮೂಲಕ ನಡೆಯುವ ದಾಳಿಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ ನಮ್ಮ ಯುದ್ಧ ತಂತ್ರವನ್ನು ಬದಲಿಸಿಕೊಳ್ಳಬೇಕು ಎಂದರು.
ಆಧುನಿಕ ತಂತ್ರಜ್ಞಾನದ ಅಗಾಧ ಬೆಳವಣಿಗೆಯ ಜತೆಗೆ ದೇಶ ಇಂದು ವಿವಿಧ ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ನಾವು ಚಿಂತನೆ ನಡೆಸಬೇಕಾಗಿದೆ ಎಂದು ಪ್ರಧಾನಿ ಹೇಳಿದರು.