ತುಮಕೂರು: ಜಾತಿಯ ಜತೆಯಲ್ಲಿ ವೃತ್ತಿ ಮುಂದುವರೆಸಿಕೊಂಡು ಹೋಗುವ ಪರಿಪಾಠ ನಿಲ್ಲಬೇಕು ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಕುಂಭೇಶ್ವರಿ ಮಹಿಳಾ ಸಂಘದ ವಾರ್ಷಿಕೋತ್ಸವ, ಗಣ್ಯರಿಗೆ ಸನ್ಮಾನ ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದಲಾದ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಲು ಬೇಕಾದ ವೃತ್ತಿ ಮಾಡುವುದು ಅನಿವಾರ್ಯವಾಗಿದೆ. ಜಾತಿಗೆ ಸೀಮಿತವಾದ ವೃತ್ತಿಯನ್ನೇ ಅನುಸರಿಸಬೇಕೆಂದಿಲ್ಲ ಎಂದರು.
ಸಮಾಜದಲ್ಲಿ ಧ್ವನಿಯಿಲ್ಲದ ಸಮುದಾಯಗಳು ಈ ರೀತಿಯ ಶೈಕ್ಷಣಿಕ ಸಾಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಆರ್ಥಿಕ ಸದೃಢತೆಯ ಕೊರತೆಯ ನಡುವೆಯೂ ಬೇರೆ ಸಮಾಜದಿಂದ ಹಿಂದೆ ಬೀಳದಂತೆ ಸಮುದಾಯದ ಅಭಿವೃದ್ಧಿಗೆ ಸಂಘ ದುಡಿಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇಯರ್ ಗೀತಾ ಮಾತನಾಡಿ, ಸಾಂಸ್ಕೃತಿಕ ಹಾಗೂ ಕಲಾ ಕ್ಷೇತ್ರದಲ್ಲಿ ಕುಂಭೇಶ್ವರಿ ಮಹಿಳಾ ಸಂಘದ ಸಾಧನೆ ಅಪಾರ ಎಂದರು. ಕುಂಬಾರರ ಸಂಘದ ಅಧ್ಯಕ್ಷ ಸಿದ್ಧನಂಜಶೆಟ್ಟಿ ಮಾತನಾಡಿದರು.
ಧರ್ಮ ಹಾಗೂ ವೈಚಾರಿಕತೆ ಕುರಿತಂತೆ ಹುಲಿಕಲ್ ನಟರಾಜ್ ಅವರು ಪವಾಡ ರಹಸ್ಯ ಬಯಲು ಕಾರ್ಯಕ್ರಮ ನಡೆಸಿಕೊಟ್ಟರು.
ಶಾಸಕ ರಾಜಣ್ಣ, ಹುಲಿಕಲ್ ನಟರಾಜ್, ಶಿವಕುಮಾರ್, ಸೌಭಾಗ್ಯ ಅಂಪಣ್ಣ, ಗೀತಾ ಅವರನ್ನು ಸನ್ಮಾನಿಸಲಾಯಿತು.