ಬೆಂಗಳೂರು: ರಾಜ್ಯದಲ್ಲಿ ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆ ಎಷ್ಟು ಎಂಬುದನ್ನು ತಿಳಿಯಲು ಸರ್ಕಾರ ಜಾತಿ ಜನಗಣತಿಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಕೆಪಿಸಿಸಿಯ ಇತರೆ ಹಿಂದುಳಿದ ವರ್ಗಗಳ ಘಟಕ ಒತ್ತಾಯಿಸಿದೆ.
ಈ ಗಣತಿಗೆ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಬಳಿ ಇರುವ 23.05 ಕೋಟಿ ರೂಪಾಯಿ ಹಣವನ್ನು ಬಳಸಿಕೊಳ್ಳಬೇಕು ಎಂದು ಘಟಕ ಒತ್ತಾಯಿಸಿದೆ.
ಹೊಸದಾಗಿ ಚುನಾಯಿತರಾದ ಬ್ಲಾಕ್ ಮತ್ತು ಜಿಲ್ಲಾ ಅಧ್ಯಕ್ಷರಿಗೆ ಬೆಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಒಂದು ದಿನ ಕಾರ್ಯಾಗಾರದಲ್ಲಿ ಘಟಕ ಈ ಆಗ್ರಹ ಮಂಡಿಸಿದೆ.
ಕಾರ್ಯಾಗಾರದಲ್ಲಿ ಮಾತನಾಡಿದ ಪಕ್ಷದ ಮುಖಂಡ ಸಿದ್ದರಾಮಯ್ಯ, `ಹಿಂದುಳಿದ ವರ್ಗಗಳ ಜನರಿಗೆ ಕಾಂಗ್ರೆಸ್ನಿಂದ ಮಾತ್ರ ನ್ಯಾಯ ದೊರೆಯಲು ಸಾಧ್ಯ. ಈ ವರ್ಗ ಬಿಜೆಪಿಯ ಹಿಂದೆ ಹೋದರೆ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ. ಜೆಡಿಎಸ್ನಿಂದಲೂ ಈ ವರ್ಗಕ್ಕೆ ನ್ಯಾಯ ಸಿಗುವುದಿಲ್ಲ~ ಎಂದು ಎಚ್ಚರಿಸಿದರು.
ಕಾರ್ಯಾಗಾರದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ, `ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ನಾನು ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ~ ಎಂದರು.
ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ, ಮುಖಂಡರಾದ ಸಿ.ಕೆ. ಜಾಫರ್ ಷರೀಫ್, ವಿನಯ್ ಕುಮಾರ್ ಸೊರಕೆ, ಆರ್.ವಿ. ವೆಂಕಟೇಶ್, ಬಿ.ಎನ್. ವೇಣುಗೋಪಾಲ್ ಮತ್ತಿತರರು ಪಾಲ್ಗೊಂಡಿದ್ದರು.