ಮಧುಗಿರಿ: ದೇಶದಲ್ಲಿರುವ ಜಾತೀಯತೆ, ಬಡತನ ಹೋಗಲಾಡಿಸಿ, ಕುಲ ಕಸುಬಗಳಿಂದ ಸೃಷ್ಟಿಯಾಗಿರುವ ಜಾತಿ ಆಧಾರದ ಮೇಲೆ ಕೀಳು, ಬಡವ-ಶ್ರೀಮಂತ ಎಂಬ ಅಸಮಾನತೆಯಿಂದ ಬದುಕುತ್ತಿರುವ ಮಾನವ ಸಮಾಜವನ್ನು ಒಂದುಗೂಡಿಸುವ ಉದ್ದೇಶದಿಂದ ಬಿಎಸ್ಪಿ ಉದಯವಾಗಿದೆ ಎಂದು ಉತ್ತರ ಪ್ರದೇಶದ ವಿಧಾನ ಪರಿಷತ್ ಸದಸ್ಯ, ಪಕ್ಷದ ಕರ್ನಾಟಕದ ಉಸ್ತುವಾರಿ ಡಾ.ಅಶೋಕ್ಸಿದ್ದಾರ್ಥ ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಧರ್ಮ-ಧರ್ಮಗಳ ನಡುವೆ ನಡೆಯುತ್ತಿರುವ ದೌರ್ಜನ್ಯ, ದಬ್ಬಾಳಿಕೆ ನಿಲ್ಲಬೇಕಾದರೆ ದಲಿತ, ಹಿಂದುಳಿದ ಅಲ್ಪಸಂಖ್ಯಾತರು ಹಾಗೂ ಮೇಲ್ಜಾತಿಗಳಲ್ಲಿರುವ ಬಡವರು ರಾಜ್ಯಾಧಿಕಾರ ಪಡೆಯಲು ಬಹುಜನ ಸಮಾಜ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡೇರಿ ಕಣಿಮಯ್ಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, ಖಜಾಂಚಿ ಕೋರಮಂಗಲ ಮುನಿಯಪ್ಪ, ಕಾರ್ಯದರ್ಶಿ ವೆಂಕಟಗಿರಿಯಪ್ಪ, ಜಿಲ್ಲಾ ಅಧ್ಯಕ್ಷ ಮಾರನಹಳ್ಳಿ ಶಿವಣ್ಣ, ಉಪಾಧ್ಯಕ್ಷ ದಿಲೀಪ್ ಮಾತನಾಡಿದರು.