ವಿಜಾಪುರ: `ವರದಕ್ಷಿಣೆ, ಅಸ್ಪೃಶ್ಯತೆ ನಿವಾರಣೆಗೆ ಅಂತರ್ಜಾತಿ ವಿವಾಹವೇ ಮದ್ದು. ಒಲವಿನ ವಿವಾಹ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ನೀಡಿದಾಗ ಮಾತ್ರ ಜಾತ್ಯತೀತ ಸಮಾಜ ನಿರ್ಮಿಸಲು ಸಾಧ್ಯ~ ಎಂದು ಬೆಂಗಳೂರಿನ ಮಾನವ ಮಂಟಪ ಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ ಹೇಳಿದರು.
ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ಮಾನವ ಮಂಟಪ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ವಿವಾಹ ಪದ್ಧತಿ, ಸಾಮಾಜಿಕ ಬದ್ಧತೆ ಹಾಗೂ ಸಾಂಸ್ಕೃತಿಕ ಸಮನ್ವಯ~ ಕುರಿತ ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
`ಇಂದಿನ ಯುವಜನತೆ ಜಾತೀಯತೆಯನ್ನು ತೊರೆದು ವೈಚಾರಿಕತೆ ಹಾಗೂ ವೈಜ್ಞಾನಿಕ ನೆಲೆಯಲ್ಲಿ ಚಿಂತಿಸಿ ವಿವಾಹವಾದರೆ ಅವರ ಜೀವನ ಸುಂದರವಾಗಿರುತ್ತದೆ~ ಎಂದರು.
`ನಮ್ಮ ದೇಶದಲ್ಲಿ ಜಾತಿಯನ್ನು ವೈಭವೀಕರಿಸಲು ಸಾಕಷ್ಟು ಶಕ್ತಿ, ಸಮಯ ಮತ್ತು ಹಣ ವ್ಯಯ ಮಾಡಲಾಗುತ್ತಿದೆ. ಈ ರೀತಿ ಪೋಲಾಗುವಿಕೆಯನ್ನು ತಡೆಯಬೇಕಾದರೆ ಜಾತಿ ಪದ್ಧತಿ ನಿರ್ಮೂಲನೆ ಮಾಡಬೇಕು~ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿವಿಯ ಹಣಕಾಸು ಅಧಿಕಾರಿ ಡಾ.ಆರ್. ಸುನಂದಮ್ಮ, `ಮಹಿಳೆಯರು ಉನ್ನತ ಶಿಕ್ಷಣ ಪಡೆದು ಜಾತಿ ಪದ್ಧತಿಯನ್ನು ತೊಡೆದು ಹಾಕಲು ಶ್ರಮಿಸಬೇಕು~ ಎಂದರು.
ಮಾನವ ಮಂಟಪ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಡಾ.ರಾಜೇಂದ್ರ ಪೋದ್ದಾರ್, ಬೀದರ್ನ ಬೆಲ್ದಾಳ ಶರಣರು, ಎಸ್.ಯು.ಸಿ.ಐ.ನ ಭಗವಾನ ರೆಡ್ಡಿ, ರೈತ ಮುಖಂಡ ಹೇಮಂತ ಕುಮಾರ್ ಮಾತನಾಡಿದರು.
ಎಚ್.ಎಂ. ಹೇಮಲತಾ ಸ್ವಾಗತಿಸಿದರು. ಸುರೇಶ ವಿಜಾಪುರ ವಂದಿಸಿದರು.