ಹಾಸನ: `ಬಾಹುಬಲಿ, ಬುದ್ಧ ಹಾಗೂ ಅಂಬೇಡ್ಕರ್ ವಿಶ್ವದ ನಾಯಕರು. ಹಿಂದೂ ಧರ್ಮದ ಹೆಸರಿನಲ್ಲಿ ಹೇರಿದ್ದ ಜಾತಿ ಪದ್ಧತಿ ಧಿಕ್ಕರಿಸಿ ವಿಶ್ವ ಮಾನವರಾದರು~ ಎಂದು ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನುಡಿದರು.
ವಿವಿಧ ದಲಿತ ಸಂಘಟನೆಗಳು ಭಾನುವಾರ ಹಾಸನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಅವರಿಗೆ ಅಭಿನಂದನೆ ಹಾಗೂ ನುಡಿನಮನ ಸಮಾರಂಭದಲ್ಲಿ ಅವರು ಮಾತನಾಡಿದರು.
`ಬಾಹುಬಲಿ ಹಿಂದೂ ಧರ್ಮವನ್ನು ಧಿಕ್ಕರಿಸಿದ ಮೊದಲ ವ್ಯಕ್ತಿ. ಒಂದು ಶತಮಾನದ ನಂತರ ಬುದ್ಧ ಅದೇ ಕಾರ್ಯವನ್ನು ಮಾಡಿದ. ಅಂಬೇಡ್ಕರ್ ಅದನ್ನು ಇನ್ನೊಂದು ರೀತಿಯಲ್ಲಿ ಮಾಡಿದರು ಎಂದರು.
ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, `ಕಾನೂನಿನಲ್ಲಿ ನುರಿತ ವ್ಯಕ್ತಿ ಎಂಬ ಕಾರಣಕ್ಕೆ ಅಂಬೇಡ್ಕರ್ ದೇಶದ ಮೊದಲ ಕಾನೂನು ಸಚಿವರಾದರೇ ವಿನಾ ದಲಿತ ಎಂಬ ಕಾರಣಕ್ಕೆ ಅಲ್ಲ~ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಿ.ಟಿ. ಇಂದಿರಾ, ಎಂ.ವಿ. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಹೇಮಗಂಗೋತ್ರಿಯ ಉಪನ್ಯಾಸಕ ದೇವರಾಜ್, ವಿವಿಧ ಸಂಘಟನೆಗಳ ಮುಖಂಡರಾದ ದ್ಯಾವಪ್ಪ, ಬಿ.ಪಿ. ಜಯರಾಂ, ಎಚ್.ಕೆ. ಸಂದೇಶ್ ಮುಂತಾದವರು ಪಾಲ್ಗೊಂಡಿದ್ದರು.