ಗಂಗಾವತಿ: ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದ ಪ್ರತಿಯೊಂದು ಜಾತಿ ಜನಾಂಗದವರು ಅಭಿವೃದ್ಧಿ ಸಾಧಿಸಬೇಕಾದರೆ ಶಿಕ್ಷಣ ಪಡೆಯುವುದು ಅನಿವಾರ್ಯ. ಜಾತಿ ಸಂಕೋಲೆ ಎಂಬ ವಿಷಕ್ಕೆ ಶಿಕ್ಷಣವೇ ಮದ್ದು ಎಂದು ಶಾಸಕ ಪರಣ್ಣ ಮುನವಳ್ಳಿ ಅಭಿಪ್ರಾಯಪಟ್ಟರು.
ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 104ನೇ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳವಾರ ಇಲ್ಲಿನ ಐಎಂಎ ಭವನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಶಿಕ್ಷಣ ಮತ್ತು ಸತತ ಯತ್ನದಿಂದ ಮಾತ್ರ ಯಶಸ್ಸು ಸಾಧ್ಯ ಎಂದರು. ಕಾರ್ಯಕ್ರಮ ಉದ್ದೇಶಿಸಿ ತಹಸೀಲ್ದಾರ ಎಲ್. ಭೀಮಾನಾಯ್ಕಾ, ಕಾಮದೊಡ್ಡಿ ದೇವಪ್ಪ ಮೊದಲಾದವರು ಮಾತನಾಡಿದರು. ಜಿ.ಪಂ. ಸದಸ್ಯ ಪಿಲ್ಲಿ ಕೊಂಡಯ್ಯ, ನಗರಸಭೆಯ ಆರ್.ಆರ್. ಪಾಟೀಲ್, ಮಾರೇಶ ಮುಷ್ಟೂರು ಇತರರಿದ್ದರು.
ಐದು ಲಕ್ಷ ಅನುದಾನ: ಇದಕ್ಕೂ ಮೊದಲು ಬಾಬು ಜಗಜೀವನ ರಾಂ ವೃತ್ತದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಪರಣ್ಣ ಮುನವಳ್ಳಿ, ಬಾಬೂಜಿ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರೂ. 5 ಲಕ್ಷ ಅನುದಾನ ನೀಡುವುದಾಗಿ ಭರವಸೆ ಕೊಟ್ಟರು.
ನಗರಸಭೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಸಂಸದ ಎಸ್. ಶಿವರಾಮಗೌಡ, ನಗರಸಭಾ ಅಧ್ಯಕ್ಷ ಬಸಪ್ಪ ನಾಯಕ, ಎಪಿಎಂಸಿ ಅಧ್ಯಕ್ಷ ಅಮರೇಗೌಡ, ಜಿ.ಪಂ. ಪ್ರಭಾರಿ ಎಇಇ ಹುಲುಗಪ್ಪ, ತೋಟಗಾರಿಕಾ ಇಲಾಖೆಯ ವಸಂತಪ್ಪ ಮೊದಲಾದವರು ಪಾಲ್ಗೊಂಡಿದ್ದರು.