ಮಾಚಗೊಂಡನಹಳ್ಳಿ (ಆಲ್ದೂರು): ಆಧುನಿಕ ಸಮಾಜ ಜಾತೀಯತೆಯ ವಿಷವರ್ತುಲದಲ್ಲಿ ಸಿಲುಕಿ ನಲುಗುತ್ತಿದೆ, ಸಾವಿರಾರು ವರ್ಷಗಳ ಹಿಂದೆಯೇ ದಲಿತರಿಗೆ ದೀಕ್ಷೆ ನೀಡುವ ಮೂಲಕ ಜಾತೀಯತೆ, ಅಸ್ಪೃಶ್ಯತೆ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಾಂತಿಕಾರಕ ಸಮಾಜ ಸುಧಾರಣಾ ಕ್ರಮಕ್ಕೆ ಮುನ್ನಡಿ ಹಾಡಿದ ಹೆಗ್ಗಳಿಕೆ ವೀರಶೈವ ಧರ್ಮದ್ದು ಎಂದು ಸಾಹಿತಿ ಚಂದ್ಯಯ್ಯ ನಾಯ್ಡು ಹೇಳಿದರು.
ಆಲ್ದೂರು ಸಮೀಪದ ಮಾಚಗೊಂಡನಹಳ್ಳಿ ಬೇರುಗಂಡಿ ಬೃಹನ್ಮಠದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ವಾರ್ಷಿಕ ಪುಣ್ಯ ಸ್ಮರಣಾರ್ಥವಾಗಿ ಸೋಮವಾರ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕಾರದ ಕೊರತೆಯಿಂದಾಗಿ ದೇಶದಾದ್ಯಂತ ಎಲ್ಲಾ ವಲಯಗಳಲ್ಲಿ ಏರುಪೇರಾಗುತ್ತಿದೆ. ಆರೋಗ್ಯವಂತ ಸಮಾಜ ನಿರ್ಮಿಸುವ ನಿಟ್ಟಿನಲ್ಲಿ ಜನರಲ್ಲಿ ಸಂಸ್ಕೃತಿ-ಸಂಸ್ಕಾರದ ಗುಣಗಳನ್ನು ಬಿತ್ತುವ ಗುರುತರ ಜವಾಬ್ದಾರಿ ಮಾಠ ಮಾನ್ಯಗಳ ಮೇಲಿದೆ ಎಂದರು.
ಶಾಸಕ ಕುಮಾರಸ್ವಾಮಿ ಮಾತನಾಡಿ, ಮಠ ಮಾನ್ಯಗಳು ಅನಾದಿಕಾಲದಿಂದಲೂ ನಾಡಿನ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪ್ರಗತಿಗೆ ತಮ್ಮದೆ ಕೊಡುಗೆ ನೀಡುವ ಮೂಲಕ ರಾಷ್ಟ್ರದ ಏಳಿಗೆಗೆ ತಮ್ಮದೇಯಾದ ಸೇವೆ ಸಲ್ಲಿಸುತ್ತಿರುವುದರೊಂದಿಗೆ ಈ ದೇಶದ ಪುರಾತನ ಸಂಸ್ಕೃತಿ, ಆಚಾರ, ವಿಚಾರ, ರೂಢಿ-ಸಂಪ್ರದಾಯಗಳನ್ನು ಜನಸಮುದಾಯದ ಮಧ್ಯೆ ಪೋಷಿಸಿ, ಉಳಿಸಿಕೊಂಡು ಬಂದಂತಹ ಪಾತ್ರ ನಿರ್ವಹಿಸುತ್ತಿವೆ. ಇದಕ್ಕಾಗಿ ಸಮಾಜ, ಸರ್ಕಾರ ಮಠಮಾನ್ಯಗಳಿಗೆ ಎಂದಿಗೂ ಋಣಿಯಾಗಿರಬೇಕಿದೆ ಎಂದರು.
ಆಲ್ದೂರು ತಾಪಂ ಸದಸ್ಯ ಎಚ್.ಎಸ್.ಕೃಷ್ಣೇಗೌಡ ಮಾತನಾಡಿ, ಜನಸಮುದಾಯ ದುರ್ಮಾರ್ಗದಲ್ಲಿ ತೆರಳುವ ಸಂದರ್ಭದಲ್ಲಿ ಮಠಾದೀಶರು ಸಮಾಜವನ್ನು ಸನ್ಮಾರ್ಗದತ್ತ ನಡೆಸುವ ಕೆಲಸ ಮಾಡಬೇಕಿದೆ. ಉತ್ತಮ ಇತಿಹಾಸ, ಸಂಸ್ಕೃತಿ ಹೊಂದಿರುವ ಮಠಾಧೀಶರ ಸಂದೇಶ ಪ್ರಸ್ತುತ ಸಮಾಜಕ್ಕೆ ಹೆಚ್ಚಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೊಮೇಶ್ವರ ಸ್ವಾಮೀಜಿ, ಹುಲಿಕೆರೆ ದೊಡ್ಡಮಠದ ಶಿವಾಚಾರ್ಯ ಸ್ವಾಮೀಜಿ, ಕಾಜುವಳ್ಳಿ ಮಠದ ಶಂಭುಲಿಂಗ ಸ್ವಾಮೀಜಿ ಹಾಗೂ ಬೇರುಗಂಡಿ ಮಠದ ರೇಣುಕ ಮಹಂತ ಸ್ವಾಮೀಜಿ ಆಶೀರ್ವಚನ ಭಾಷಣ ಮಾಡಿದರು.
ತಾಪಂ ಸದಸ್ಯ ಗಂಗಯ್ಯ ಸತ್ತಿಹಳ್ಳಿ ಗ್ರಾಪಂ ಅಧ್ಯಕ್ಷ ಪುಟ್ಟೇಗೌಡ, ಕಾಫಿ ಬೆಳೆಗಾರ ಕೃಷ್ಣೇಗೌಡ, ವೀರಶೈವ ಮಹಾಸಭಾದ ಉಮೇಶ್, ಗಂಗಾಧರ್ ಪಾಟೀಲ್ ಕುಲಕರ್ಣಿ, ದ್ಯಾವಪ್ಪ ಗೌಡ, ಸೂರಪ್ಪನಹಳ್ಳಿ ಶಂಕರ್, ಸಿದ್ದೇಗೌಡ, ರೇಣುಕಾಚಾರ್ಯ, ಜಿಪಂ ಸದಸ್ಯೆ ಸವಿತಾ ರಮೇಶ್ ಮೊದಲಾದವರು ವೇದಿಕೆಯಲ್ಲಿದ್ದರು. ಇದಕ್ಕೂ ಮೊದಲು ಮಠದ ಆವರಣದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ರಂಬಾಪುರಿ ಶ್ರೀಗಳ ಸಮ್ಮುಖದಲ್ಲಿ ಜರುಗಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.