ಗದಗ: ಇಲ್ಲಿನ ತೋಂಟದಾರ್ಯ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪಶುಪಾಲನಾ ಇಲಾಖೆ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ದೇಸಿ ಜಾನುವಾರು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಪ್ರದರ್ಶನದಲ್ಲಿ ದೇಸಿ ತಳಿಯ ವಿವಿಧ ಹೋರಿ, ಆಕಳು, ಕರು, ಮಣಕಗಳು ಸೇರಿದಂತೆ ಎಚ್ಎಫ್, ಜರ್ಸಿ ಸಂಕರಿತ ತಳಿಯ ಆಕಳುಗಳು ಭಾಗವಹಿಸಿದ್ದವು. ಪ್ರದರ್ಶನವನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿತ್ತು. ಹೋರಿ, ಜೋಡಿ ಎತ್ತುಗಳು, ಜರ್ಸಿ, ಎಚ್ಎಫ್, ದೇಸಿ ವಿಭಾಗಗಳಲ್ಲಿ ಒಟ್ಟು ನೂರು ಜಾನುವಾರುಗಳಿದ್ದವು.
ದೇಸಿ ತಳಿಯ ದೆವನಿ, ಮಲೆನಾಡ ಗಿಡ್ಡ, ಖಿಲಾರಿ, ಹಳ್ಳಿಕಾರ್, ಗೀರ್ ಹೋರಿ, ಆಕಳ ಹಾಗೂ ಕರುಗಳು ಪ್ರದರ್ಶನದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಧಾರವಾಡ ಜಿಲ್ಲೆಯ ದಾಟನಾಳ, ಗದುಗಿನ ಹುಲಕೋಟಿ, ಬೆಟಗೇರಿ, ಪಾಪಾನಾಶಿ, ಕಳಸಾಪುರ, ಹಿರೇಹಂದಿಗೋಳ ಸೇರಿದಂತೆ ವಿವಿಧ ಗ್ರಾಮದ ರೈತರು ತಮ್ಮ ರಾಸುಗಳನ್ನು ಪ್ರದರ್ಶಿಸಿದರು.ಪ್ರದರ್ಶನವನ್ನು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಚಾಲನೆಗೊಳಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎನ್.ವಿ. ಚಂದ್ರಶೇಖರ ಹಾಜರಿದ್ದರು.