ವಿಜಾಪುರ: ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ಅಂಗವಾಗಿ ತೊರವಿಯಲ್ಲಿ ನಡೆಯುತ್ತಿರುವ ಜಾನುವಾರು ಜಾತ್ರೆಗೆ ಲಕ್ಷಕ್ಕೂ ಅಧಿಕ ರಾಸುಗಳನ್ನು ತರಲಾಗಿದೆ. ಬೆಲೆ ಅರ್ಧದಷ್ಟು ಕಡಿಮೆ ಇದ್ದರೂ, ಕೊಳ್ಳುವವರೇ ಇಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗದ ರೈತ ಪ್ರಕಾಶ ಕೃಷ್ಣಪ್ಪ ಅಂಬಿ ಅವರ ಎರಡು ಹಲ್ಲಿನ ಹೋರಿ ಜಾತ್ರೆಯ ಪ್ರಮುಖ ಆಕರ್ಷಣೆ. ಆ ಹೋರಿಗೆ ಅವರು ರೂ. 3 ಲಕ್ಷ ದರ ನಿಗದಿ ಪಡಿಸಿದ್ದಾರೆ. ಸೋಮವಾರ ಪುಣೆಯಿಂದ ಬಂದಿದ್ದ ಮಾವುಲಿ ತಾಕವಾನೆ ಎಂಬವರು ರೂ. 2 ಲಕ್ಷ ಕೊಟ್ಟು ಅದನ್ನು ಖರೀದಿಸಲು ಮುಂದಾಗಿದ್ದರು. ಆದರೆ, ವ್ಯವಹಾರ ಕುದುರಲಿಲ್ಲ.
`ಕಳೆದ ವರ್ಷಕ್ಕಿಂತ ಈ ವರ್ಷ ಜಾತ್ರೆಗೆ ತಂದಿರುವ ಜಾನುವಾರುಗಳ ಸಂಖ್ಯೆ ಹೆಚ್ಚು. ಮೇವಿನ ಕೊರತೆಯಿಂದ ಮಾರಾಟ ಮಾಡುವವರು ಹೆಚ್ಚಾ ಗಿದ್ದಾರೆ. ನಾವು ಬಂದು ಮೂರು ದಿನ ಗಳಾಗಿದ್ದು, ಕೊಳ್ಳುವವರೇ ಸುಳಿದಿಲ್ಲ' ಎಂದು ತೊರವಿ ಗ್ರಾಮದ ರೈತ ನೀಲು ಜಾಧವ ಹೇಳಿದರು.
`ಭೀಕರ ಬರದಿಂದ ರೈತರು ಇನ್ನೂ ಚೇತರಿಸಿಕೊಂಡಿಲ್ಲ. ಈ ವರ್ಷದ ಜೋಳದ ಬೆಳೆಯೂ ಕೈಕೊಡುವ ಲಕ್ಷಣ ಕಂಡು ಬರುತ್ತಿದೆ. ರೂ. 50ಸಾವಿರ ಬೆಲೆಬಾಳುವ ಜೋಡಿ ಎತ್ತುಗಳನ್ನು ರೂ. 30ರಿಂದ 35 ಸಾವಿರಕ್ಕೆ ಬೇಡುತ್ತಿದ್ದಾರೆ. ಆದರೂ ಧೈರ್ಯ ಮಾಡಿ ಖರೀದಿ ಸುತ್ತಿಲ್ಲ' ಎನ್ನುತ್ತಾರೆ ಅವರು.
`ರಾಸುಗಳ ವಹಿವಾಟಿನ ಪ್ರಮಾಣ ಕೇವಲ ಶೇ.10ರಷ್ಟು ಮಾತ್ರ ಇದೆ' ಎಂದು ತಾಲ್ಲೂಕಿನ ಜಾಲಗೇರಿ ಗ್ರಾಮದ ರೈತ ನಾಗಪ್ಪ ಹೇಳಿದರು.
`ಐದು ವರ್ಷಗಳಿಂದ ಈ ಜಾತ್ರೆಗೆ ಬರುತ್ತಿದ್ದೇವೆ. ಕಳೆದ ವರ್ಷ ವಹಿವಾಟು ಹೆಚ್ಚಿತ್ತು. ರೂ. 60ರಿಂದ 70 ಸಾವಿರ ಮೌಲ್ಯದ ಬದುಕುಗಳು ಈಗ ರೂ. 30 ರಿಂದ ರೂ. 35 ಸಾವಿರದಷ್ಟು ಕಡಿಮೆ ಬೆಲೆಗೆ ಲಭ್ಯ ಇವೆ. ದರ ಕಡಿಮೆ ಇದ್ದರೂ ಕೊಳ್ಳುವವರೂ ಹಿಂಜರಿಯುತ್ತಿದ್ದಾರೆ' ಎಂದು ರಾಸು ಖರೀದಿಗೆ ಬಂದಿದ್ದ ರಾಮತೀರ್ಥ ಗ್ರಾಮದ ಕರಿಯಪ್ಪ ಕೊಕಟನೂರ ಹೇಳಿದರು.
`ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಜಾನುವಾರುಗಳು ಬಂದಿವೆ. ಜಾತ್ರೆ ಆರಂಭಗೊಂಡು ಮೂರು ದಿನ ಕಳೆದಿದ್ದು, ಒಟ್ಟಾರೆ 2000 ರಾಸುಗಳು ಮಾತ್ರ ಮಾರಾಟವಾಗಿವೆ. ಜೋಡಿ ರಾಸುಗಳಿಗೆ ರೂ. 13 ಸಾವಿರದಿಂದ ರೂ. 75 ಸಾವಿರ ವರೆಗೆ ವಹಿವಾಟು ನಡೆದಿದೆ' ಎಂದು ಎಪಿಎಂಸಿ ಸಿಬ್ಬಂದಿ ಮಾಹಿತಿ ನೀಡಿದರು.
`ಅಲ್-ಅಮೀನ್ ಮತ್ತು ಬಿಎಲ್ಡಿಇ ವೈದ್ಯಕೀಯ ಕಾಲೇಜುಗಳಿಂದ ರೈತರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ' ಎಂದು ಆಸ್ಪತ್ರೆಯ ಸಿಬ್ಬಂದಿ ಮೊಹ್ಮದ್ ಸಾದಿಕ್ ಖಾದ್ರಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.