ನವದೆಹಲಿ (ಐಎಎನ್ಎಸ್): ಖ್ಯಾತ ಜಾದೂಗಾರ ಗೋಪಿನಾಥ್ ಮುಥುಕದ್ ಅವರು `ಜಾದೂಗಾರರ ಆಸ್ಕರ್~ ಎಂದೇ ಕರೆಯಲಾಗುವ ಅಂತರರಾಷ್ಟ್ರೀಯ ಮೆರ್ಲಿನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಪ್ರತಿಷ್ಠಿತ ಮೆರ್ಲಿನ್ ಪ್ರಶಸ್ತಿ ಪಡೆಯುತ್ತಿರುವ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಮೆರಿಕ ಮೂಲದ ಅಂತರರಾಷ್ಟ್ರೀಯ ಜಾದೂಗಾರರ ಸಮಾಜ (ಐಎಂಎಸ್) ನೀಡುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಜೂನ್ 23ರಂದು ವಿಶ್ವದ ನೂರಾರು ಪ್ರಸಿದ್ಧ ಜಾದೂಗಾರರ ಸಮ್ಮುಖದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಐಎಂಎಸ್ ಅಧ್ಯಕ್ಷ ಟೋನಿ ಹಸ್ಸಿನಿ ಅವರು ಪ್ರದಾನ ಮಾಡಲಿದ್ದಾರೆ.
ಕೇರಳ ಮೂಲದವರಾದ ಗೋಪಿನಾಥ್ ಅವರು ಜಾದೂ ಮತ್ತು ಸಾಹಸ ಪ್ರದರ್ಶಕರಾಗಿದ್ದು, ಕಳೆದ 35 ವರ್ಷಗಳಿಂದ ಜಾದೂ ಕಲೆ ಮತ್ತು ವಿಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ಜನಪ್ರಿಯಗೊಳಿಸುವಲ್ಲಿ ಅವರು ಸಲ್ಲಿಸಿರುವ ಗಣನೀಯ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪಿ.ಸಿ. ಸರ್ಕಾರ್ ಜೂನಿಯರ್ ಅವರು ಈ ಪ್ರಶಸ್ತಿ ಪಡೆದುಕೊಂಡ ಮೊದಲ ಭಾರತೀಯ ಜಾದೂಗಾರರಾಗಿದ್ದಾರೆ.