ಕಾರವಾರ: ತಾಲ್ಲೂಕಿನ ಸಿದ್ಧರದ ಮಲ್ಲಿಕಾರ್ಜುನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇದೇ 21ರಂದು ಕರ್ನಾಟಕ ಜಾನಪದ ಪರಿಷ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ಗೀತಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಪ್ರಕಾಶ ನಾಯಕ ತಿಳಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಘಟಕವನ್ನು ಜಾನಪದ ಪರಿಷತ್ನ ರಾಜ್ಯ ಸಂಚಾಲಕ ಎಸ್. ಬಾಲಾಜಿ ಉದ್ಘಾಟಿಸುವರು. ಜಾನಪದ ಗೀತ ಗಾಯನ ಸ್ಪರ್ಧೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎಂ. ಶ್ರೀಕಂಠಯ್ಯ ಚಾಲನೆ ನೀಡುವರು. ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಎಸ್. ರಾಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಜಾನಪದ ಪರಿಷತ್ನ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಪೇರುಮನೆ, ಕಾರ್ಯದರ್ಶಿ ಎಚ್.ಎಸ್. ಗುನಗಾ ಹಾಗೂ ಕಾಲೇಜಿನ ಪ್ರಾಚಾರ್ಯ ಮೋಹನ ವಿ. ರಾಣೆ, ಸಿದ್ಧರದ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಪ್ರಕಾಶ ವಿ. ಕಲ್ಗುಟಕರ, ಮಲ್ಲಿಕಾರ್ಜುನ ಪ್ರೌಢಶಾಲೆ ಮುಖ್ಯಶಿಕ್ಷಕ ಗಿರೀಶ ಪಾಟೀಲ, ಬಾಲಕಿಯರ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಿ.ಎಮ್. ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಎಸ್. ರಾಣೆ, ಮಲ್ಲಿಕಾರ್ಜುನ ಮಹಾವಿದ್ಯಾಲಯದ ಪ್ರಾಚಾರ್ಯ ಮೋಹನ ವಿ. ರಾಣೆ ಹಾಜರಿದ್ದರು.