ಶ್ರೀರಂಗಪಟ್ಟಣ: ದಸರಾ ಮಹೋತ್ಸವದಲ್ಲಿ ಪಟ್ಟಣದ ಶ್ರಿರಂಗವೇದಿಕೆಯಲ್ಲಿ ಸೋಮವಾರ ರಾತ್ರಿ ನಡೆದ ವಿವಿಧ ಪ್ರಕಾರದ ಜಾನಪದ ಕಲೆಗಳ ಪ್ರದರ್ಶನ ಪ್ರೇಕ್ಷಕರಿಗೆ ಮುದ ನೀಡಿತು.
ಮಂಡ್ಯ ತಾಲ್ಲೂಕು ಕೀಲಾರ ಗ್ರಾಮದ ಕ್ಷೀರ ಸಾಗರ ಮಿತ್ರ ಕೂಟದ ಕಲಾವಿದರು ಜಾನಪದ ನೃತ್ಯ ಪ್ರದರ್ಶಿಸಿದರು. ಪಟದ ಕುಣಿತದ ವಿವಿಧ ಭಂಗಿಗಳು ಆಕರ್ಷಕವಾಗಿದ್ದವು. ಏಕ ಕಾಲಕ್ಕೆ ಹತ್ತಾರು ಮಂದಿ ನಂದಿಕೋಲು ಹಿಡಿದು ವೇದಿಕೆ ಮೇಲೆ ಹೆಜ್ಜೆ ಹಾಕುತ್ತಿದ್ದರೆ ವೇದಿಕೆಯ ಮುಂದೆ ಕುಳಿತಿದ್ದ ಪ್ರೇಕ್ಷಕರು ಅದಕ್ಕೆ ಪ್ರತಿಕ್ರಿಯಿಸಿದರು.`ಯಾಕೋ ಮಾರಮ್ಮ ನಿನ್ನ ಮೊಕವೆಲ್ಲಾ ಸಪ್ಪಾಗೆ... ಜನಪದ ಹಾಡಿಗೆ ಕೇಳುಗರು ದನಿಗೂಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಪಟು ಡಾ.ಶಿವರಾಂ ಕಾರಂತ ಅವರ ಶಿಷ್ಯ ಗೋಪಾಲಕಷ್ಣ ಭಟ್ ಮತ್ತು ತಂಡ ಪ್ರಸ್ತುತ ಪಡಿಸಿದ ಮಹಿಷಾಸುರ ಮರ್ದಿನಿ ಪ್ರೇಕ್ಷಕರಲ್ಲಿ ಪುಳಕವುಂಟುಮಾಡಿತು. ದಕ್ಷಿಣ ಕನ್ನಡ ಜಿಲ್ಲೆಯ ಜಾನಪದ ಕಲೆಗೆ ಬಯಲು ಸೀಮೆಯ ಜನರು ತಲೆದೂಗಿದರು. ಮಹಿಷಾಸುರ ಮರ್ದಿನಿ ಪಾತ್ರ ಗಮನ ಸೆಳೆಯಿತು.ವಿದುಷಿ ಸಾದ್ವಿ ಮತ್ತು ತಂಡ ಅಭಿವ್ಯಕ್ತಪಡಿಸಿದ ಭರತನಾಟ್ಯದ ವಿವಿಧ ಪ್ರಕಾರಗಳು ರಂಜನೆ ನೀಡಿದವು.