ಇಳಕಲ್: ಕರ್ನಾಟಕ ರಕ್ಷಣಾ ವೇದಿಕೆಯ ಬಾಗಲಕೋಟೆ ಜಿಲ್ಲಾ ಘಟಕ, ಹುನಗುಂದ ತಾಲ್ಲೂಕು ಘಟಕ ಹಾಗೂ ನಗರ ಘಟಕದ ಸಹಯೋಗದಲ್ಲಿ ಆಯೋಜಿಸಿದ ಜಾನಪದ ಸಂಭ್ರಮ ಹಾಗೂ ಜಾಗೃತಿ ಸಮಾವೇಶದ ಅಂಗವಾಗಿ ಬುಧವಾರ ನಾಡದೇವಿ ಭುವನೇಶ್ವರಿಯ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.
ನಗರದ ಬಸವೇಶ್ವರ ವೃತ್ತದಿಂದ ಕಂಠಿ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಕರಡಿ ಮಜಲು, ಕುದುರೆ ಕುಣಿತ, ಡೊಳ್ಳು ಕುಣಿತ, ಮರಗಾಲು ಕುಣಿತ ಸೇರಿದಂತೆ ಅನೇಕ ಜಾನಪದ ಮೇಳಗಳು ಪಾಲ್ಗೊಂಡು ಮೆರವಣಿಗೆಗೆ ಸಾಂಸ್ಕೃತಿಕ ಮೆರುಗು ತಂದವು.
ಮೆರವಣಿಗೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ಟಿ.ಎ ನಾರಾಯಣಗೌಡ, ಮಹಿಳಾ ಘಟಕದ ಉಪಾಧ್ಯಕ್ಷೆ ರೇಶ್ಮಾ ಪಡಕೆನೂರ, ಕನ್ನಡ ಪರ ಚಿಂತಕ ಗುರುನಾಥಪ್ಪ ನಾಗಲೋಟಿ, ನೀಲಕಂಠ ಕಾಳಗಿ, ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಅಧ್ಯಕ್ಷ ರಮೇಶ ಬದ್ನೂರ, ತಾಲ್ಲೂಕು ಘಟಕದ ಅಧ್ಯಕ್ಷ ರಂಜಾನ್ ನದಾಫ, ಮಹಾಂತೇಶ ಕುಂಬಾರ, ಮಲ್ಲು ಮಡಿವಾಳರ, ಕಿರಣ ಮಿಣಜಗಿ, ಪ್ರಮೋದ ಜತ್ತಿ, ಮಹಾಂತೇಶ ಪಾಟೀಲ, ನಾಗರಾಜ ನಗರಿ, ಉಸ್ಮಾನ ಅತ್ತಾರ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.
ಮೆರವಣಿಗೆಗೂ ಮುಂಚೆ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ನಗರದೆಲ್ಲೆಡೆ ಕನ್ನಡ ಬಾವುಟಗಳು ಹಾರಾಡಿದವು.