ಬಾಗಲಕೋಟೆ: ಆಧುನಿಕತೆ ವ್ಯವಸ್ಥೆಯಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದಾಗಿ ಜಾನಪದ ಸಂಸ್ಕೃತಿ ನಾಶವಾಗುತ್ತಿದೆ ಎಂದು ಕೆರೂರಿನ ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ವಿಷಾದ ವ್ಯಕ್ತಪಡಿಸಿದರು.
ಹರಳಯ್ಯ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಇತ್ತೀಚಿಗೆ ಜಿಲ್ಲೆಯ ಕೆರೂರಿನಲ್ಲಿ ಏರ್ಪಡಿಸಿದ್ದ ಜಾನಪದ ಕಲಾಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇದ ಹಾಗೂ ಉಪನಿಷತ್ತು ಎಷ್ಟು ಸತ್ಯವೋ ಅಷ್ಟೇ ಮಹತ್ವ ಪಡೆದು ಜಾನಪದ ಶ್ರೀಮಂತವಾಗಿತ್ತು. ಆದರೆ ಪಾಶ್ಚಾತ್ಯ ಸಂಸ್ಕೃತಿಯಿಂದ ಜಾನಪದ ಸಂಸ್ಕೃತಿ ಮರೆಯಾಗುತ್ತಿದೆ ಎಂದು ಹೇಳಿದರು.
ಕೆರೂರಿನ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ಎಫ್.ಸಿದ್ಧನಕೊಳ್ಳ ಮಾತನಾಡಿ, ಈಗಿನ ಟಿವಿ ಮಾಧ್ಯಮದಿಂದ ಜಾನಪದ ಸಂಸ್ಕೃತಿಯ ಮರೆಯಾಗುತ್ತಿದೆ ಎಂದು ತಿಳಿಸಿದರು. ಎಸ್.ಎಂ. ಸಜ್ಜನ, ದಶರಥಪ್ಪ ಅಂಕದ, ಹಿರಿಯ ಜಾನಪದ ಕಲಾವಿದ ಕುಶಾಲಪ್ಪ ಸಣ್ಣಕ್ಕಿ, ಮಹಾಂತೇಶ ಮೆಣಸಗಿ, ವಿ.ಎಂ.ಗೌಡರ, ಚಂದ್ರಪ್ಪ ಗೊಂದಿ, ಆರ್.ಸಿ.ಹಲಗಿಮನಿ, ಪೀತಾಂಬ್ರಪ್ಪ ಹವೇಲಿ ಎ.ಎಸ್.ಚಂದಾವರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.