ಧಾರವಾಡ:ಜಾನಪದ ಸಾಹಿತ್ಯ ನಮ್ಮ ಸಂಸ್ಕತಿಯ ಜೀವಾಳ. ಅದು ಸದಾ ಕಾಲ ಚಲನಶೀಲವಾಗಿರಬೇಕು. ಅದರ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು.
ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಜಾನಪದ ಕಲೆ ಸಣ್ಣಾಟ ಹಾಗೂ ಗೀಗೀ ಪದ ಕುರಿತ ವಿಚಾರಸಂಕಿರಣ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಎಂ.ಚಲವಾದಿ ಮಾತನಾಡಿ, ಜಾನಪದ ಸಣ್ಣಾಟ, ಗೀಗೀ ಪದ ಮುಂತಾದ ಜಾನಪದ ಕಲೆಗಳು ಕ್ಷೀಣಿಸುತ್ತಿವೆ. ಹಳ್ಳಿಗಳ ಸ್ಥಿತಿ ಮೊದಲಿನಂತೆ ಉಳಿದಿಲ್ಲ. ಎಲ್ಲದರಲ್ಲೂ ರಾಜಕೀಯ ನಡೆದಿದೆ ಎಂದು ವಿಷಾದಿಸಿದರು.
ಡಾ. ಏಣಗಿ ಬಾಳಪ್ಪ ಅಧ್ಯಕ್ಷತೆ ವಹಿಸಿದ್ದರು. ಸಣ್ಣಾಟ ಕುರಿತು ಡಾ. ಎಚ್.ವೈ. ತಿಮ್ಮಾಪೂರ, ಡಾ. ಸುಖದೇವ ಪಾನಬುಡೆ ಮತ್ತು ಗೀಗೀ ಪದ ಕುರಿತು ಡಾ. ಕೆ.ಎನ್.ದೊಡ್ಡಮನಿ ಹಾಗೂ ಡಾ. ರಾಮೂ ಮೂಲಗಿ ಮಾತನಾಡಿದರು.
ಶಂಕರ ಕುಂಬಿ ಸ್ವಾಗತಿಸಿದರು. ಡಾ. ಧನವಂತ ಹಾಜವಗೋಳ ನಿರೂಪಿಸಿದರು. ಡಾ. ಎಂ.ಜಿ.ಹರಿಹರ ವಂದಿಸಿದರು.
ಲಕ್ಷ್ಮೀಬಾಯಿ ಹರಿಜನ, ಶಾರದಾ ಗೀಗೀಪದ ಮೇಳ ಹಾಗೂ ತಂಡದವರು ಗೀಗೀ ಪದಗಳ ಹಾಡುಗಾರಿಕೆಯ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಿದರು. ಬೆಳಗಾವಿ ಜಿಲ್ಲೆಯ ಮಾರಿಹಾಳದ ಸಕ್ರೆವ್ವ ಪಾತ್ರೋಟ ಹಾಗೂ ಸಂಗಡಿಗರು ಸಂಗ್ಯಾಬಾಳ್ಯಾ ಸಣ್ಣಾಟ ಪ್ರದರ್ಶಿಸಿದರು.