ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿಯ ಚಿಕ್ಕಾಕುಂದ ಗ್ರಾಮದಿಂದ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಜಾನುವಾರುಗಳನ್ನು ಸರ್ಕಲ್ ಇನ್ಸ್ಪೆಕ್ಟರ್ ಎಚ್.ಎನ್. ಸಿದ್ದಯ್ಯ ಅವರ ನಿರ್ದೇಶನದಂತೆ ಶನಿವಾರಸಂತೆ ಪೊಲೀಸರು ವಾಹನ ಸಮೇತ ಸೋಮವಾರ ವಶಪಡಿಸಿಕೊಂಡಿದ್ದಾರೆ.
ಚಿಕ್ಕಾಕುಂದ ಗ್ರಾಮದ ಮುಖ್ಯರಸ್ತೆಯಲ್ಲಿ ವೇಗವಾಗಿ ಧಾವಿಸುತ್ತಿದ್ದ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಜಾನುವಾರುಗಳಿರುವುದು ಖಚಿತವಾಯಿತು. ವಾಹನದಲ್ಲಿದ್ದ 3 ಹಸು, 3 ಕರು, 1ಎತ್ತು, 1ಎಮ್ಮೆ ಸೇರಿ ಒಟ್ಟು 8 ಜಾನುವಾರುಗಳು ಇದ್ದವು.
ವಾಹನ ಚಾಲಕ ಪರಾರಿಯಾಗಿದ್ದಾನೆ. ಜಾನುವಾರುಗಳ ಮೌಲ್ಯ ರೂ. 36 ಸಾವಿರ ಎಂದು ಅಂದಾಜಿಸಲಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಂಗಳವಾರ ಜಾನುವಾರುಗಳನ್ನು ಮೈಸೂರಿನ ಗೋಶಾಲೆ ಪ್ರಾಣಿ ದಯಾ ಸಂಘಕ್ಕೆ ಕಳುಹಿಸಿಕೊಡಲಾಯಿತು.
ಸಿಪಿಐ ಎಚ್.ಎನ್. ಸಿದ್ದಯ್ಯ, ಪಿಎಸ್ಐ ಮಹಾದೇವಯ್ಯ, ಸಿಬ್ಬಂದಿಗಳಾದ ಕೆ.ಪಿ. ರಮೇಶ್, ಕೃಷ್ಣಮೂರ್ತಿ ಹಾಗೂ ಪ್ರಕಾಶ್ ಪಾಲ್ಗೊಂಡಿದ್ದರು.
ಕಾರ್ಮಿಕ ಆತ್ಮಹತ್ಯೆ
ಗೋಣಿಕೊಪ್ಪಲು: ಜೀವನದಲ್ಲಿ ಜುಗುಪ್ಸೆ ಹೊಂದಿದ ಕಾರ್ಮಿಕನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಮಾಯಮುಡಿ ಸಮೀಪದ ಧನುಗಾಲದಲ್ಲಿ ನಡೆದಿದೆ. ಕಾಳ (35) ಎಂಬಾತನೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಪತ್ನಿ ಮತ್ತು ಮಕ್ಕಳು ಈತನಿಂದ ದೂರವಾಗಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಕಾಳ ತಾನು ವಾಸವಾಗಿದ್ದ ಎ.ಜಿ.ವಿಠಲ ಅವರ ಲೈನ್ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದಾನೆ. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವ್ಯಕ್ತಿ ಮೇಲೆ ಹಲ್ಲೆ
ಗೋಣಿಕೊಪ್ಪಲು: ಕಿರುಗೂರು ಗ್ರಾಮದ ನಿವಾಸಿ ಸುರೇಶ್ ಎಂಬಾತನ ಮೇಲೆ ಅದೇ ಗ್ರಾಮದ ಆಲೆಮಾಡ ದಯಾ ಎಂಬಾತ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿರುಗೂರಿನ ಲೈನ್ ಮನೆಯೊಂದರಲ್ಲಿ ಸುರೇಶ್ ಹಾಗೂ ಆತನ ಸಂಬಂಧಿ ಮಣಿ ವಾಸವಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಹೊರಗಿನಿಂದ ಬಂದ ಆಲೆಮಾಡ ದಯಾ ಎಂಬುವವರು ದೊಣ್ಣೆಯಿಂದ ತನ್ನ ಮೇಲೆ ವಿನಾಕರಣ ಹಲ್ಲೆ ನಡೆಸಿದರು ಎಂದು ಸುರೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಸಬ್ ಇನ್ಸ್ಪೆಕ್ಟರ್ ಸುಬ್ರಹ್ಮಣ್ಯ ಪ್ರಕರಣ ದಾಖಲಿಸಿಕೊಂಡು ಕ್ರಮಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.