ಬಾಣಾವರ: ಬರದಿಂದ ಕಂಗೆಟ್ಟಿರುವ ಬಾಣಾವರ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ಈಗ ಜಾನುವಾರುಗಳಿಗೆ ಆಶ್ರಯ ಸಿಗುತ್ತಿದೆ.
ಯಾರ್ಡ್ನಲ್ಲಿ ಗೋಶಾಲೆ ತೆರದಿರುವುದರಿಂದ ಮನೆಗಳಲ್ಲಿ ಕುಡಿಯುವ ನೀರಿಗೂ ಕಷ್ಟ ಅನುಭವಿಸುತ್ತಿರುವ ಅನೇಕ ರೈತರಿಗೆ ನೆಮ್ಮದಿ ಲಭಿಸಿದಂತಾಗಿದೆ.
ಪಟ್ಟಣದ ಎನ್.ಹೆಚ್.206 ರಸ್ತೆಯ ಪಕ್ಕದಲ್ಲಿರುವ ವಿಶಾಲ ಎಪಿಎಂಸಿ ಯಾರ್ಡ್ ನಲ್ಲಿ ಕಳೆದ 12 ದಿನಗಳಿಂದ ಬಾಣಾವರ, ಕರಡಿಹಳ್ಳಿ, ಬುಚ್ಚನಕೊಪ್ಪಲು, ಕೆಂಚೆನಹಳ್ಳಿ, ಮಾಸ್ತಿಹಳ್ಳಿ, ಹಳ್ಳಿಕೆರೆ, ಮನಕತ್ತೂರು ಗ್ರಾಮಗಳ ಸುಮಾರು 1250-1500 ರಾಸುಗಳು ಆಶ್ರಯ ಪಡೆದಿವೆ.
ರೈತರೇ ತಮ್ಮ ರಾಸುಗಳ ಸಂಖ್ಯೆಗೆ ತಕ್ಕಂತೆ ತೆಂಗಿನ ಗರಿಯಿಂದ ನೆರಕೆ ಕಟ್ಟಿ ದನಕರುಗಳಿಗೆ ನೆರಳು ಬರುವಂತೆ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಹುಲ್ಲು ಹಾಗೂ ನೀರನ್ನು ಪಡೆದು ದನಕರುಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ. ಪ್ರತಿ ದಿನ 10.30 ಗಂಟೆಗೆ ಸರಿಯಾಗಿ ಪ್ರತಿ ರಾಸಿಗೆ 5-7 ಕೆಜಿ ಮೇವು ನೀಡಲಾಗುತ್ತಿದೆ. ಇಲ್ಲಿ ಬರುವ ಎಲ್ಲ ರೈತರಿಗೆ ಕಾರ್ಡ್ ವಿತರಿಸಲಾಗಿದ್ದು, ರಾಸುಗಳ ಸಂಖ್ಯೆ ಹಾಗೂ ಪ್ರತಿ ದಿನ ನೀಡುವ ಮೇವಿನ ಪ್ರಮಾಣವನ್ನು ನಮೂದಿಸಲಾಗುತ್ತಿದೆ.
ಪ್ರತಿ ದಿನ ರೈತರೇ ಮುಂದೆ ನಿಂತು ಶುಚಿಗೊಳಿಸುವ ಕಾರ್ಯ ಹಾಗೂ ಮೇವನ್ನು ಅಧಿಕಾರಿಗಳ ಜೊತೆ ಸೇರಿ ಹಂಚುವ ಕಾಯಕದಲ್ಲಿ ಕೈಜೋಡಿಸುವುದರಿಂದ ಯಾವುದೇ ಗಲಿಬಿಲಿಗೆ ಅವಕಾಶವಿಲ್ಲದಂತೆ ಎಲ್ಲರೂ ಸರತಿಯಲ್ಲಿ ನಿಂತು ತಮ್ಮ ಪಾಲಿನ ಮೇವನ್ನು ಪಡೆಯುತ್ತಿದ್ದಾರೆ. ಸುತ್ತಮುತ್ತ ಯಾವುದೇ ಹಳ್ಳಿ ಯಲ್ಲೂ ಮೇವು ದೊರೆಯುತ್ತಿಲ್ಲ ವಾದ್ದರಿಂದ್ದ ಶಿವವೆಾಗ್ಗ ಹಾಗೂ ತೀರ್ಥಹಳ್ಳಿಯಿಂದ ಲಾರಿಗಳಲ್ಲಿ ಮೇವು ತರಿಸಲಾಗುತ್ತಿದೆ ಮತ್ತು ರಾಸುಗಳಿಗೆ ಕುಡಿಯುವ ನೀರಿಗಾಗಿ ಪ್ರತಿದಿನ ಟ್ಯಾಂಕರ್ಗಳಲ್ಲಿ ನೀರು ತಂದು ಬಾನಿಗಳಲ್ಲಿ ಸುರಿಯುವು ದರಿಂದ ರಾಸುಗಳಿಗೆ ಬೇಕಾದಾಗ ನೀರು ದೊರೆಯುತ್ತಿದೆ. ಗೋಶಾಲೆ ಯಲ್ಲಿ ದನಕರುಗಳ ಚಿಕಿತ್ಸೆಗಾಗಿ ಪಶು ವೈದ್ಯರನ್ನು ನೇಮಿಸಲಾಗಿದೆ.
ಸಂಜೆ 5 ಗಂಟೆಯವರೆಗೂ ಸ್ಥಳೀಯ ರೈತರು ಗೋಶಾಲೆಯಲ್ಲಿಯೇ ಇದ್ದು ನಂತರ ತಮ್ಮ ಮನೆಗಳಿಗೆ ತೆರಳುವರು. ಆದರೆ ದೂರದ ಹಳ್ಳಿಗಳಿಂದ ಬರುವ ರೈತರು ರಾತ್ರಿಯೂ ಇಲ್ಲಿಯೇ ಉಳಿದು ತಮ್ಮ ದನಕರುಗಳನ್ನು ಜತನ ಮಾಡುತ್ತಿದ್ದಾರೆ. ಕಳೆದ ಒಂದು ದಶಕದಿಂದ ಮಳೆಯಾಗದ ಪರಿಣಾಮ ಸುತ್ತಮುತ್ತ ಮೇವು ದೊರೆಯದೇ ಕಂಗಾಲಾದ ರೈತರಿಗೆ ಜಿಲ್ಲಾಡಳಿತದ ಈ ಕ್ರಮ ರೈತರು ದನ-ಕರುಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡಿದಂತಾಗಿದೆ.
ಬಾಣಾವರ ಹೋಬಳಿಯ ರೈತರು ತಮ್ಮ ಜೀವನ ನಿರ್ವಹಣೆಗಾಗಿ ದನಕರುಗಳನ್ನು ಎಷ್ಟರ ಮಟ್ಟಿಗೆ ಅವಲಂಬಿಸಿದ್ದಾನೆ ಎಂಬುದು ಇಲ್ಲಿಗೆ ಭೇಟಿನೀಡಿದರೆ ಅರಿವಾಗುತ್ತದೆ.
ಬಾಣಾವರದಲ್ಲಿ ವಾರಕ್ಕೊಮ್ಮೆ ದನಗಳ ಸಂತೆ ನಡೆಸಿದರೆ ದನಕರುಗಳನ್ನು ತರುಲು ದೂರದೂರಿಗೆ ಹೋಗುವುದು ತಪ್ಪುತ್ತದೆ ಎಂಬ ಮನವಿಯನ್ನು ರೈತರು ಮಾಡುತ್ತಿದ್ದಾರೆ.
ಅವರ ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರು ದನಗಳ ವಾರದ ಸಂತೆ ನಡೆಸುವ ಬಗ್ಗೆ ಒಲವು ವ್ಯಕ್ತ ಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.