ಮಹದೇವಪುರ: `ಮನುಷ್ಯರಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಬೇಕು. ಅಂದಾಗ ಮಾತ್ರ ಮಾನವನ ಜನ್ಮಕ್ಕೆ ಸಾರ್ಥಕತೆ ಬಂದಂತಾಗುತ್ತದೆ~ ಎಂದು ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅಭಿಪ್ರಾಯಪಟ್ಟರು.
ತಮ್ಮ 78ನೇ ಹುಟ್ಟು ಹಬ್ಬದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಭೈರತಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. `ಮನುಷ್ಯ ಜನ್ಮ ಪವಿತ್ರವಾದದ್ದು. ಅದು ಜೀವನ ಕಲಹಗಳಿಂದ ಕೂಡಿರಬಾರದು. ಎಲ್ಲರೂ ಪರಸ್ಪರ ಪ್ರೀತಿ ವಿಶ್ವಾಸದಿಂದ ಬಾಳಬೇಕು. ಅಂತಹ ಜೀವನ ಕಲೆಯನ್ನು ನಮ್ಮ ದೇಶದ ಹಿರಿಯ ನಾಯಕರು ತೋರಿಸಿಕೊಟ್ಟಿದ್ದಾರೆ~ ಎಂದು ಅವರು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಬಿ.ಎ.ಬಸವರಾಜು ಮಾತನಾಡಿ, `ದೇಶದ ರಾಜಕೀಯ ಇತಿಹಾಸದಲ್ಲಿ ಸಿ.ಕೆ.ಜಾಫರ್ ಷರೀಫ್ ಅವರ ಹೆಸರು ಶಾಶ್ವತವಾಗಿದೆ. ದೇಶದ ಮೂವರು ಪ್ರಧಾನಿಗಳ ಅಧಿಕಾರ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಅವರ ತತ್ವ ಮತ್ತು ಆದರ್ಶಗಳನ್ನು ಯುವ ನಾಯಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು~ ಎಂದು ಕರೆ ನೀಡಿದರು.
ಮಾಜಿ ಉಪ ಮೇಯರ್ ಶಂಕರ್, ಕೆಪಿಸಿಸಿ ಸದಸ್ಯ ಬಿ.ಶಿವಣ್ಣ, ದೊಡ್ಡಗುಬ್ಬಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿರಾಜು ಇತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಬಸವರಾಜು ಬಡ ಹೆಣ್ಣು ಮಕ್ಕಳಿಗೆ ಸೀರೆಗಳನ್ನು ವಿತರಿಸಿದರು. ಆನಂತರ ಅನ್ನದಾನ ಕಾರ್ಯಕ್ರಮವನ್ನು ಕೂಡ ಏರ್ಪಡಿಸಲಾಗಿತ್ತು.