ಹೈದರಾಬಾದ್ ( ಪಿಟಿಐ): ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಸಿಬಿಐನಿಂದ ಬಂಧನಕ್ಕೊಳಗಾಗಿ ಚಂಚಲಗುಡ ಜೈಲಿನಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಓಬಳಾಪುರಂ ಗಣಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯವು ಮಂಗಳವಾರ ತಿರಸ್ಕರಿಸಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ ನಾಗಮಾರುತಿ ಶರ್ಮಾ ಅವರು ರೆಡ್ಡಿದ್ವಯರ ಜಾಮೀನು ಅರ್ಜಿ ತಿರಸ್ಕರಿಸಿ, ಹೆಚ್ಚಿನ ವಿಚಾರಣೆಗಾಗಿ ತಕ್ಷಣವೇ ಅವರನ್ನು ಸೆಪ್ಟೆಂಬರ್ 19ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸುವಂತೆ ಚಂಚಲಗುಡ ಜೈಲು ಅಧಿಕಾರಿಗಳಿಗೆ ಹೇಳಿದರು.
ಕರ್ನಾಟಕದ ಹೊರಗೆ ಮತ್ತು ಆಂಧ್ರ ಪ್ರದೇಶದಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ರೆಡ್ಡಿದ್ವಯರಿಗೆ ವೈಯಕ್ತಿಕ ಮಾಹಿತಿಗಳು ಇರುವ ಕಾರಣ ಅವರ ವಿಚಾರಣೆ ನಿರ್ಣಾಯಕವಾಗಿದ್ದು ಇಬ್ಬರನ್ನೂ 15 ದಿನಗಳ ಅವಧಿಗೆ ತನ್ನ ವಶಕ್ಕೆ ನೀಡಬೇಕು ಎಂದು ಸಿಬಿಐ ಮೊದಲಿಗೆ ಮನವಿ ಮಾಡಿತ್ತು.
ಜೊತೆಗೆ ಜಾಲದಲ್ಲಿ ಷಾಮೀಲಾಗಿದ್ದಾರೆಂದು ಆಪಾದಿಸಲಾಗಿರುವ ಸರ್ಕಾರಿ ಅಧಿಕಾರಿಗಳೊಂದಿನ ಸಂಚಿನ ಮಾಹಿತಿಯನ್ನು ಅವರಿಂದ ಪಡೆಯಬಹುದು ಎಂದೂ ಸಿಬಿಐ ವಾದಿಸಿತ್ತು.
ಸಿಬಿಐ ರೆಡ್ಡಿ ಅವರ ಓಬಳಾಪುರಂ ಗಣಿಗಾರಿಕಾ ಕಂಪೆನಿ ವಿರುದ್ಧ 2009ರ ಡಿಸೆಂಬರ್ 7ರಂದು ಪ್ರಕರಣ ದಾಖಲಿಸಿತ್ತು. ಅನಂತಪುರ ಜಿಲ್ಲೆಯ ಓಬಳಾಪುರಂ ಮತ್ತು ಮಲ್ಪನಗುಡಿ ಗ್ರಾಮಗಳಲ್ಲಿ ಓಬಳಾಪುರಂ ಗಣಿಗಾರಿಕಾ ಕಂಪೆನಿಗೆ ಗಣಿಗಾರಿಕೆ ಗುತ್ತಿಗೆ ನೀಡಿಕೆಯಲ್ಲಿನ ಅಕ್ರಮಗಳ ಆಪಾದನೆಗಳ ಹಿನ್ನೆಲೆಯಲ್ಲಿ ಆಂದ್ರಪ್ರದೇಶ ಸರ್ಕಾರ ಈ ಕುರಿತು ತನಿಖೆಗೆ ಮನವಿ ಮಾಡಿತ್ತು.
ಜನಾರ್ದನ ರೆಡ್ಡಿ ಮತ್ತು ಶ್ರೀನಿವಾಸ ರೆಡ್ಡಿ ಅವರನ್ನು ಸಿಬಿಐ ಸೆಪ್ಟೆಂಬರ್ 5ರಂದು ಬಳ್ಳಾರಿಯಲ್ಲಿ ಬಂಧಿಸಿತ್ತು.