ಪೌರಪ್ರಜ್ಞೆಗೆ ಮಕ್ಕಳ ಚಳವಳಿ ಸಂಸ್ಥೆ (ಸಿಎಂಸಿಎ) ಆಯೋಜಿಸಿರುವ 3ನೇ ಜಾಯ್ ಆಫ್ ಗೀವಿಂಗ್ ಫೆಸ್ಟಿವಲ್ನಲ್ಲಿ ಬಾಲಿವುಡ್ ನಟನಟಿಯರು, ಕ್ರಿಕೆಟಿಗರು ಹಾಗೂ ಬಿಲ್ಡರ್ಸ್ಗಳು ಪಾಲ್ಗೊಳ್ಳಲಿದ್ದಾರೆ.
ಆನ್ಲೈನ್ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಿಡ್ಡರ್ಗಳು ನಟಿ ರವೀನಾ ಟಂಡನ್, ಸಿಎಂಸಿಎ ಗುಡ್ವಿಲ್ ರಾಯಭಾರಿ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾನಿ ಹಾಗೂ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರೊಂದಿಗೆ ಊಟ ಸವಿಯಬಹುದು. ಇದರ ಜತೆಗೆ ನಟ ಬೊಮ್ಮನ್ ಇರಾನಿ ಅವರೊಂದಿಗೆ ಸಮಯ ಕಳೆಯುವ ಅಪೂರ್ವ ಅವಕಾಶ ಕೂಡ ಲಭ್ಯವಿದೆ.
ಕಳೆದ 10 ವರ್ಷಗಳಿಂದ ಸಿಎಂಸಿಎಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಸಂಸ್ಥೆಯ ಹಿತೈಷಿ ರಾಹುಲ್ ದ್ರಾವಿಡ್ ಅವರು `ಬಿಡ್ಡಿಂಗ್ ಟು ಬಿಲ್ಡ್ ಅವರ್ ನೇಶನ್~ ಕಾರ್ಯಕ್ರಮದ ಅಂಗವಾಗಿ ತಮ್ಮ ಹಸ್ತಾಕ್ಷರವಿರುವ ಬ್ಯಾಟ್ ಹರಾಜಿಗೆ ನೀಡಿದ್ದಾರೆ.
`ಸಿಎಂಸಿಎನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಿರಿಯರನ್ನು ನೋಡಿದಾಗ ನಮಗೆ ಖುಷಿ ಎನಿಸುತ್ತದೆ. ಕಿರಿಯರಲ್ಲಿ ಪೌರಪ್ರಜ್ಞೆಯನ್ನು ಜಾಗೃತಿಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಸಿಎಂಸಿಎ ಕಾರ್ಯ ಸ್ತುತ್ಯಾರ್ಹ~ ಎನ್ನುತ್ತಾರೆ ಅವರು.
ಸಿಎಂಸಿಎ ಇನ್ನೊಂದು ಮಹತ್ವಾಕಾಂಕ್ಷೆ ಕಾರ್ಯಕ್ರಮ `ವೈಲ್ ಯು ಆರ್ ಈಟಿಂಗ್~ ರೆಸ್ಟೋರೆಂಟ್ ಕ್ಯಾಂಪೇನ್. ಇದಕ್ಕೆ ನಗರದ ಬಹುತೇಕ ರೆಸ್ಟೋರೆಂಟ್ಗಳು ಸಹಾಯ ನೀಡಿ ಸಹಕರಿಸಿವೆ.
ಹರಾಜು ಪ್ರಕ್ರಿಯೆ ಇಂದು ಕೊನೆಗೊಳ್ಳಲಿದೆ. ಮಾಹಿತಿಗೆ: 2553 8584, 6583 4322.