ಬೆಂಗಳೂರು: ತಮ್ಮ ಖಾಸಗಿ ಕಾರಿನ ಚಾಲಕನಿಗೆ ದಂಡ ವಿಧಿಸಿದ್ದ ಅಶೋಕ ನಗರ ಸಂಚಾರ ಠಾಣೆಯ ಎಎಸ್ಐ ಎಚ್.ಆರ್.ಶ್ರೀನಿವಾಸ್ ಮತ್ತು ಕಾನ್ ಸ್ಟೆಬಲ್ ಪಿ.ಪವನ್ ಅವರ ಕರ್ತವ್ಯ ನಿಷ್ಠೆಯನ್ನು ಮೆಚ್ಚಿಕೊಂಡಿರುವ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಆ ಇಬ್ಬರನ್ನು ಕಚೇರಿಗೆ ಕರೆಸಿಕೊಂಡು ಅಭಿನಂದಿಸಿದ್ದಾರೆ.
ಜಾರ್ಜ್ ಅವರಿದ್ದ ‘ಆಡಿ’ ಕಾರು ಡಿ.7ರ ಸಂಜೆ 7.30ರ ಸುಮಾರಿಗೆ ಅಶೋಕನಗರದ ಡಿಸೋಜಾ ಜಂಕ್ಷನ್ನ ಸಿಗ್ನಲ್ ಬಳಿ ನಿಂತಿತ್ತು. ಅಲ್ಲಿಗೆ ಬಂದ ಶ್ರೀನಿವಾಸ್ ಮತ್ತು ಪವನ್, ಆ ಕಾರಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ (ಪೆಂಡಿಗ್ ಕೇಸಸ್) ಬಗ್ಗೆ ಬ್ಲಾಕ್ಬೆರ್ರಿ ಸಾಧನದಿಂದ ಪರಿಶೀಲಿಸಿದ್ದಾರೆ.
ಆಗ ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದ್ದ ಹಳೆಯ ಪ್ರಕರಣವೊಂದು ಪತ್ತೆಯಾಗಿದೆ.
ಇದಕ್ಕಾಗಿರೂ100 ದಂಡ ಕಟ್ಟು ವಂತೆ ಸಿಬ್ಬಂದಿ, ಸಚಿವರ ಕಾರು ಚಾಲಕನಿಗೆ ಹೇಳಿದ್ದಾರೆ. ಆದರೆ, ಚಾಲಕ ದಂಡ ಕಟ್ಟಲು ನಿರಾಕರಿಸಿ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಜಾರ್ಜ್ ಅವರ ಕಡೆಗೆ ನೋಡಿದ್ದಾನೆ. ಆಗ ಜಾರ್ಜ್ ಅವರುರೂ100ರ ನೋಟನ್ನು ಚಾಲಕನಿಗೆ ಕೊಟ್ಟು ರಸೀದಿ ಪಡೆಯುವಂತೆ ಸೂಚಿಸಿದ್ದಾರೆ. ದಂಡದ ಹಣ ಪಡೆದ ಶ್ರೀನಿವಾಸ್ ರಸೀದಿ ನೀಡಿ ಬಳಿಕ ಹಳೆಯ ಯಾವುದೇ ಪ್ರಕರಣ ಇಲ್ಲ ಎಂಬು ದನ್ನು ಬ್ಲಾಕ್ಬೆರ್ರಿ ಸಾಧನದ ಮೂಲಕ ಚಾಲಕನಿಗೆ ತೋರಿಸಿದ್ದಾರೆ.
ಮರು ದಿನ ಜಾರ್ಜ್, ಅಶೋಕ ನಗರ ಸಂಚಾರ ಠಾಣೆ ಇನ್ಸ್ಪೆಕ್ಟರ್ ಅವರಿಗೆ ಕರೆ ಮಾಡಿ ಹಿಂದಿನ ದಿನ ಡಿಸೋಜಾ ಜಂಕ್ಷನ್ನಲ್ಲಿ ಕರ್ತವ್ಯ ದಲ್ಲಿದ್ದ ಸಿಬ್ಬಂದಿ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ, ಅವರೊಂದಿಗೆ ಕಚೇರಿಗೆ ಬಂದು ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದ್ದಾರೆ. ಸಚಿವರ ಅವರ ಕಚೇರಿಗೆ ಹೋದ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗೆ ಮೊದಲಿಗೆ ತಾವೇನು ತಪ್ಪು ಮಾಡಿದ್ದೇವೆ ಎಂಬ ಬಗ್ಗೆ ಆತಂಕ ಮೂಡಿತ್ತು. ಬಳಿಕ ತಮ್ಮ ಕರ್ತವ್ಯನಿಷ್ಠೆ ಬಗ್ಗೆ ಗೃಹ ಸಚಿವರಿಂದಲೇ ಪ್ರಶಂಸೆ ದೊರೆತ ನಂತರ ಶ್ರೀನಿವಾಸ್ ಹಾಗೂ ಪವನ್ ಸಂತಸ ಗೊಂಡಿದ್ದಾರೆ.
‘ಗೃಹ ಸಚಿವರಿಂದ ಬುಲಾವ್ ಬಂದಿರುವ ವಿಷಯ ತಿಳಿದಾಗ ಆತಂಕ ವಾಗಿತ್ತು. ಅವರನ್ನು ಭೇಟಿ ಯಾಗಲು ಹೋದಾಗ, ಸಚಿವರು ಸೀಟಿ ನಿಂದ ಎದ್ದು ಬಂದು ಹಸ್ತಲಾಘವ ನೀಡಿ ಅಭಿನಂದಿಸಿದರು.’ ಎಂದು ಶ್ರೀನಿವಾಸ್ ತಿಳಿಸಿದರು. ‘ಸ್ನೇಹಿತನನ್ನು ಭೇಟಿ ಯಾಗಲು ಖಾಸಗಿ ಕಾರಿನಲ್ಲಿ ಹೊರಟಿದ್ದೆ. ಆಗ ಬೆಂಗಾವಲು ಪಡೆ ಇರಲಿಲ್ಲ’ಎಂದು ಜಾರ್ಜ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.