ಲಾಸ್ ಕಾಬೋಸ್ (ಮೆಕ್ಸಿಕೊ) (ಐಎಎನ್ಎಸ್/ಪಿಟಿಐ): ಎರಡು ದಿನಗಳ ಕಾಲ ಇಲ್ಲಿ ನಡೆಯಲಿರುವ `ಜಿ- 20~ ಏಳನೇ ಶೃಂಗಸಭೆಗೆ ಆಗಮಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಈ ಶೃಂಗಸಭೆಯು ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿಗೆ ಮಾರ್ಗೋಪಾಯ ಸೂಚಿಸಬಲ್ಲದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಲ್ಲಿನ `ಸಾನ್ ಜೋಸ್ ಡೆಲ್ ಕಾಬೋ~ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಜಾಗತಿಕ ಆರ್ಥಿಕತೆಯು ತೀರ ದುಃಸ್ಥಿತಿಯಲ್ಲಿದೆ. ಇದರಿಂದ ಹೊರಬರಲು ಈ ಶೃಂಗಸಭೆಯಲ್ಲಿ ರಚನಾತ್ಮಕ ಮಾರ್ಗೋಪಾಯಗಳು ದೊರಕಬಹುದು~ ಎಂದರು.
ಮಿತ್ರ ರಾಷ್ಟ್ರವಾದ ಮೆಕ್ಸಿಕೊದಲ್ಲಿ ಈ ಸಲ ನಡೆಯುತ್ತಿರುವ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವುದು ಸಂತಸ ನೀಡಿದೆ ಎಂದು ಕಳೆದ ಆರು ಶೃಂಗಸಭೆಗಳಲ್ಲೂ ಭಾಗವಹಿಸಿರುವ ಸಿಂಗ್ ನುಡಿದರು.ಬ್ರಿಕ್ಸ್~ ರಾಷ್ಟ್ರಗಳ ಮುಖಂಡರಾದ ಬ್ರೆಜಿಲ್ ಅಧ್ಯಕ್ಷ ಡಿಲ್ಮಾ ರೌಸೆಫ್, ರಷ್ಯದ ಅಧ್ಯಕ್ಷ ವಾದ್ಲಿಮಿರ್ ಪುಟಿನ್, ಚೀನಾ ಪ್ರಧಾನಿ ವೆನ್ ಜಿಯಾಬಾವೊ, ದಕ್ಷಿಣ ಆಫ್ರಿಕದ ಅಧ್ಯಕ್ಷ ಜೇಕಬ್ ಜುಮ ಅವರನ್ನು ಪ್ರಧಾನಿ ಸಿಂಗ್ ಭೇಟಿ ಮಾಡಲಿದ್ದಾರೆ.
ಶೃಂಗಸಭೆಯ ಆತಿಥೇಯ ರಾಷ್ಟ್ರ ಮೆಕ್ಸಿಕನ್ ಅಧ್ಯಕ್ಷ ಫೆಲಿಪ್ ಕಾಲ್ಡಾರಾನ್, ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರನ್ನು ಸಿಂಗ್ ಭೇಟಿಯಾಗಲಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನೂ ಭೇಟಿ ಮಾಡುವ ಸಾಧ್ಯತೆ ಇದೆ.
ವಿವಿಧ ರಾಷ್ಟ್ರಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು ಬುಧವಾರದವರೆಗೂ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಧಾನಿ ಸಿಂಗ್ ಅವರಿಗೆ ಹಿಂದಿಯಲ್ಲಿ ಆತ್ಮೀಯ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣದಿಂದ ಅವರು ತಂಗಿರುವ ಹೋಟೆಲ್ ವರೆಗಿನ ಮಾರ್ಗದಲ್ಲಿದ್ದ ಬೃಹತ್ ಫಲಕಗಳಲ್ಲಿ `ಆಪ್ ಕಾ ಸ್ವಾಗತ್ ಹೈ~ ಎಂಬ ಅಕ್ಷರಗಳು ಮೂಡಿದವು.