ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಂಆರ್‌–ಮಾಲ್ಡೀವ್ಸ್‌ ಮಾತುಕತೆ ಆರಂಭ

ರದ್ದಾದ ಮಾಲೆ ವಿಮಾನ ನಿಲ್ದಾಣ ಯೋಜನೆ ಬಿಕ್ಕಟ್ಟು ಪರಿಹಾರ
Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದ ಜಿಎಂಆರ್‌ ಕಂಪೆನಿಯು ಮಾಲೆಯಲ್ಲಿ ಅಭಿವೃದ್ಧಿಪಡಿಸಲು ಕೈಗೆತ್ತಿ­ಕೊಂಡಿದ್ದ ರೂ. 3,100 ಕೋಟಿಗೂ ಅಧಿಕ ಮೌಲ್ಯದ ರದ್ದಾಗಿರುವ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಬಗ್ಗೆ ಮಾತುಕತೆ ಆರಂಭವಾಗಿದೆ.

ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆ ಹರಿಸಿಕೊಳ್ಳಲು ಈ ಮೂಲಕ ಪ್ರಯತ್ನ ನಡೆ­ಯು­ತ್ತಿದೆ ಎಂದು ಮಾಲ್ಡೀವ್ಸ್‌ನ ನೂತನ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ತಿಳಿಸಿದ್ದಾರೆ. ಆದರೆ ಇದೊಂದು ಭಾರಿ ರಾಜಕೀಕರಣಗೊಂಡ ಪ್ರಕರಣ. ಹಾಗಾಗಿ ಬೃಹತ್‌ ಮೂಲ­ಸೌಕರ್ಯ ಕಂಪೆನಿ ಜಿಎಂಆರ್‌ಗೆ ಮಾಲೆ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ­ಪಡಿಸುವ ಯೋಜನೆ ಮತ್ತೆ ದೊರೆಯುವ ಸಾಧ್ಯತೆ ಇಲ್ಲ ಎಂಬರ್ಥದಲ್ಲಿ ಯಾಮೀನ್‌ ಮಾತನಾಡಿದ್ದಾರೆ.

‘ಮಾತುಕತೆ ಮೂಲಕ ಪರಿಹರಿಸಲು ಸಾಧ್ಯ­ವಿಲ್ಲದ ವಿಷಯಗಳೇ ಇಲ್ಲ. ಹಾಗಾಗಿ ಜಿಎಂಆರ್‌ ಜೊತೆ ಮಾತುಕತೆಗೆ ನಾವು ಉತ್ಸುಕರಾಗಿದ್ದೇವೆ. ನಾವಿಲ್ಲಿ ಮಾತನಾಡುತ್ತಿರುವ ಹೊತ್ತಿನಲ್ಲಿ ಅಲ್ಲಿ ಜಿಎಂಆರ್‌ ಪ್ರತಿನಿಧಿಗಳು ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ’ ಎಂದು ಯಾಮೀನ್‌ ಹೇಳಿದರು.

ರಾಜಕೀಯ ಒತ್ತಡ ರದ್ದತಿಗೆ ಕಾರಣ: ಮಹಮ್ಮದ್‌ ವಹೀದ್‌ ನೇತೃತ್ವದ ಮಾಲ್ಡೀವ್ಸ್‌ ಸರ್ಕಾರ 14 ತಿಂಗಳ ಹಿಂದೆ ಜಿಎಂಆರ್‌ ಯೋಜನೆಯನ್ನು ಏಕಪಕ್ಷೀಯವಾಗಿ ರದ್ದುಪಡಿಸಿತ್ತು. ರಾಜಕೀಯ ಒತ್ತಡ ಈ ಯೋಜನೆ ರದ್ದಾಗಲು ಕಾರಣವಾಗಿತ್ತು.

ಪ್ರಸ್ತುತ ಸರ್ಕಾರವೇ ಯೋಜನೆಯನ್ನು ಅನುಷ್ಠಾನ­­ಗೊಳಿಸುತ್ತಿದೆ. ಯಾವುದಾದರೂ ಭಾಗ­ವನ್ನು ವಿದೇಶಿ ಕಂಪೆನಿಗಳಿಗೆ ನೀಡಬೇಕೆ ಎಂಬುದು ಇನ್ನೂ ನಿರ್ಧಾರ­ವಾಗಿಲ್ಲ ಎಂದು ಯಾಮೀನ್‌ ಹೇಳಿದರು.  ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಜಿಎಂಆರ್‌ ಕಂಪೆನಿಗೆ ಸ್ವಾಗತವಿದೆ ಎಂದು ಅವರು ಸ್ಪಷ್ಟಪಡಿಸಿದರು.

ರೂ.155 ಕೋಟಿ ತುರ್ತು ಸಾಲ: ಕೆಲವು ಭಾರತೀಯ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಎಂದು ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ಅವರನ್ನು ಕೇಳಿಕೊಂಡಿದ್ದಾರೆ.

ಜಿಎಂಆರ್‌ ಸಂಸ್ಥೆಯ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ಬಿಕ್ಕಟ್ಟನ್ನು  ಸೌಹಾರ್ದ­ಯುತವಾಗಿ ಬಗೆ ಹರಿಸಿಕೊಳ್ಳಿ ಎಂದೂ ಪ್ರಧಾನಿ ಸಲಹೆ ನೀಡಿದ್ದಾರೆ.
ರಕ್ಷಣೆ, ಭದ್ರತೆ ಮತ್ತು ಆರ್ಥಿಕ ಸಹಕಾರಗಳಂತಹ ಮಹತ್ವದ ವಿಷಯಗಳ ಬಗ್ಗೆ ಯಾಮೀನ್‌ ಅವ­ರೊಂದಿಗೆ ಸಿಂಗ್‌ ಚರ್ಚೆ ನಡೆಸಿದರು.

ಸಹಕಾರ ಅನಿವಾರ್ಯ: ಭಾರತ ಸದಾ ಮಾಲ್ಡೀವ್ಸ್‌ಗೆ ಸಹಕಾರ ನೀಡುತ್ತಾ ಬಂದಿದ್ದು, ಈ ಸಂಬಂಧವನ್ನು ಮುಂದುರಿಸಿಕೊಂಡು ಹೋಗಲು ದೃಢ ನಿಶ್ಚಯ ಮಾಡಿಕೊಂಡಿದ್ದೇನೆ ಎಂದು ಅಧಿಕಾರ ವಹಿಸಿಕೊಂಡ ನಂತರ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಯಾಮೀನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT