ನವದೆಹಲಿ (ಪಿಟಿಐ): ಭಾರತದ ಜಿಎಂಆರ್ ಕಂಪೆನಿಯು ಮಾಲೆಯಲ್ಲಿ ಅಭಿವೃದ್ಧಿಪಡಿಸಲು ಕೈಗೆತ್ತಿಕೊಂಡಿದ್ದ ರೂ. 3,100 ಕೋಟಿಗೂ ಅಧಿಕ ಮೌಲ್ಯದ ರದ್ದಾಗಿರುವ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಬಗ್ಗೆ ಮಾತುಕತೆ ಆರಂಭವಾಗಿದೆ.
ನ್ಯಾಯಾಲಯದ ಹೊರಗೆ ಸಮಸ್ಯೆ ಬಗೆ ಹರಿಸಿಕೊಳ್ಳಲು ಈ ಮೂಲಕ ಪ್ರಯತ್ನ ನಡೆಯುತ್ತಿದೆ ಎಂದು ಮಾಲ್ಡೀವ್ಸ್ನ ನೂತನ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ತಿಳಿಸಿದ್ದಾರೆ. ಆದರೆ ಇದೊಂದು ಭಾರಿ ರಾಜಕೀಕರಣಗೊಂಡ ಪ್ರಕರಣ. ಹಾಗಾಗಿ ಬೃಹತ್ ಮೂಲಸೌಕರ್ಯ ಕಂಪೆನಿ ಜಿಎಂಆರ್ಗೆ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸುವ ಯೋಜನೆ ಮತ್ತೆ ದೊರೆಯುವ ಸಾಧ್ಯತೆ ಇಲ್ಲ ಎಂಬರ್ಥದಲ್ಲಿ ಯಾಮೀನ್ ಮಾತನಾಡಿದ್ದಾರೆ.
‘ಮಾತುಕತೆ ಮೂಲಕ ಪರಿಹರಿಸಲು ಸಾಧ್ಯವಿಲ್ಲದ ವಿಷಯಗಳೇ ಇಲ್ಲ. ಹಾಗಾಗಿ ಜಿಎಂಆರ್ ಜೊತೆ ಮಾತುಕತೆಗೆ ನಾವು ಉತ್ಸುಕರಾಗಿದ್ದೇವೆ. ನಾವಿಲ್ಲಿ ಮಾತನಾಡುತ್ತಿರುವ ಹೊತ್ತಿನಲ್ಲಿ ಅಲ್ಲಿ ಜಿಎಂಆರ್ ಪ್ರತಿನಿಧಿಗಳು ನಮ್ಮ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ’ ಎಂದು ಯಾಮೀನ್ ಹೇಳಿದರು.
ರಾಜಕೀಯ ಒತ್ತಡ ರದ್ದತಿಗೆ ಕಾರಣ: ಮಹಮ್ಮದ್ ವಹೀದ್ ನೇತೃತ್ವದ ಮಾಲ್ಡೀವ್ಸ್ ಸರ್ಕಾರ 14 ತಿಂಗಳ ಹಿಂದೆ ಜಿಎಂಆರ್ ಯೋಜನೆಯನ್ನು ಏಕಪಕ್ಷೀಯವಾಗಿ ರದ್ದುಪಡಿಸಿತ್ತು. ರಾಜಕೀಯ ಒತ್ತಡ ಈ ಯೋಜನೆ ರದ್ದಾಗಲು ಕಾರಣವಾಗಿತ್ತು.
ಪ್ರಸ್ತುತ ಸರ್ಕಾರವೇ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಯಾವುದಾದರೂ ಭಾಗವನ್ನು ವಿದೇಶಿ ಕಂಪೆನಿಗಳಿಗೆ ನೀಡಬೇಕೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಯಾಮೀನ್ ಹೇಳಿದರು. ಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಜಿಎಂಆರ್ ಕಂಪೆನಿಗೆ ಸ್ವಾಗತವಿದೆ ಎಂದು ಅವರು ಸ್ಪಷ್ಟಪಡಿಸಿದರು.
ರೂ.155 ಕೋಟಿ ತುರ್ತು ಸಾಲ: ಕೆಲವು ಭಾರತೀಯ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರು ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅವರನ್ನು ಕೇಳಿಕೊಂಡಿದ್ದಾರೆ.
ಜಿಎಂಆರ್ ಸಂಸ್ಥೆಯ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆಯ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಿ ಎಂದೂ ಪ್ರಧಾನಿ ಸಲಹೆ ನೀಡಿದ್ದಾರೆ.
ರಕ್ಷಣೆ, ಭದ್ರತೆ ಮತ್ತು ಆರ್ಥಿಕ ಸಹಕಾರಗಳಂತಹ ಮಹತ್ವದ ವಿಷಯಗಳ ಬಗ್ಗೆ ಯಾಮೀನ್ ಅವರೊಂದಿಗೆ ಸಿಂಗ್ ಚರ್ಚೆ ನಡೆಸಿದರು.
ಸಹಕಾರ ಅನಿವಾರ್ಯ: ಭಾರತ ಸದಾ ಮಾಲ್ಡೀವ್ಸ್ಗೆ ಸಹಕಾರ ನೀಡುತ್ತಾ ಬಂದಿದ್ದು, ಈ ಸಂಬಂಧವನ್ನು ಮುಂದುರಿಸಿಕೊಂಡು ಹೋಗಲು ದೃಢ ನಿಶ್ಚಯ ಮಾಡಿಕೊಂಡಿದ್ದೇನೆ ಎಂದು ಅಧಿಕಾರ ವಹಿಸಿಕೊಂಡ ನಂತರ ಮೊದಲ ವಿದೇಶ ಪ್ರವಾಸ ಕೈಗೊಂಡಿರುವ ಯಾಮೀನ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.